ADVERTISEMENT

ಅಸಹಾಯಕರಿಗೆ ಕ್ಯಾಮೆರಾ ಸಹಾಯ

ಆರ್.ಶಿವರಾಮ ಸಂಡೂರು
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST
ಅಸಹಾಯಕರಿಗೆ  ಕ್ಯಾಮೆರಾ ಸಹಾಯ
ಅಸಹಾಯಕರಿಗೆ ಕ್ಯಾಮೆರಾ ಸಹಾಯ   

ಕಣ್ಣು, ಕೈಕಾಲುಗಳು ಸರಿಯಿದ್ದವರನ್ನೇ ಯಾಮಾರಿಸುವ ಇಂದಿನ ಜನರ ಮಧ್ಯೆ ಇಲ್ಲೊಬ್ಬ ‘ಕ್ಯಾಮೆರಾ ಯುವಕ’ ಅಂಗವಿಕಲರಿಗೆ, ವಯೋವೃದ್ಧರಿಗೆ ಉಚಿತವಾಗಿ ಭಾವಚಿತ್ರ ತೆಗೆದುಕೊಟ್ಟು ‘ಕ್ಯಾಮೆರಾ ಸೇವೆ’ ಮಾಡುತ್ತಿದ್ದಾರೆ.

ವೃತ್ತಿಯಿಂದ ಛಾಯಾಗ್ರಾಹಕ ಆಗಿರುವ ಎನ್.ಎಂ.ವಿದ್ಯಾಧರ ಅವರದ್ದು ಈ ಸೇವೆ. ಓದಿದ್ದು ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್. ಸೂಕ್ತ ನೌಕರಿ ಸಿಗದಾಗ ತಂದೆ, ಅಜ್ಜರಿಂದ ಬಳುವಳಿಯಾಗಿ ಬಂದ ಕ್ಯಾಮೆರಾ ಇವರ ಸಂಗಾತಿಯಾಯಿತು.

ಸಂಡೂರಿನಲ್ಲಿ ೨೦೦೮ರಲ್ಲಿ ಸ್ವಂತ ಸ್ಟುಡಿಯೊ ಆರಂಭಿಸಿದರು. ಶಾಲಾ ದಾಖಲಾತಿ, ಬಸ್‌ಪಾಸ್‌ಗೆ, ಸರ್ಕಾರದ ವಿವಿಧ ಯೋಜನೆಗಳ ಸಲುವಾಗಿ ಭಾವಚಿತ್ರದ ಅವಶ್ಯವಿರುವ ಅಂಧರು, ಅಂಗವಿಕಲರು, ವೃದ್ಧರು ಹಾಗೂ ಅಸಹಾಯಕರಿಗೆ ಇವರದ್ದು ಅಂದಿನಿಂದಲೂ ಉಚಿತ ಸೇವೆ. ಇದುವರೆಗೆ ೩ಸಾವಿರಕ್ಕೂ ಮಿಕ್ಕ ಜನರಿಗೆ ಉಚಿತವಾಗಿ ಫೋಟೊ ತೆಗೆದುಕೊಟ್ಟಿದ್ದಾರೆ.

ಹಳ್ಳಿ ಬದುಕಿನ ಅರಿವಿರುವ ಇವರು ಬಿಡುವಿದ್ದಾಗ ನಿಸರ್ಗ, ಪ್ರಾಣಿ ಪಕ್ಷಿಗಳ ಚಿತ್ರ ತೆಗೆಯುತ್ತಾರೆ. ಹೀಗೆ ಹಲವಾರು ಅಪೂರ್ವ ಚಿತ್ರಗಳು ಇವರ ಬಳಿ ಇವೆ.

ಇವರ ಉಚಿತ ಸೇವೆಯನ್ನು ಗುರುತಿಸಿ ೨೦೧೦ರಲ್ಲಿ ತಾಲ್ಲೂಕು ಆಡಳಿತ ಸನ್ಮಾನ ನೀಡಿ ಗೌರವಿಸಿದೆ.
‘ನನಗೆ ಫೋಟೊ ಅವಶ್ಯಕತೆ ಇತ್ತು. ಆದರೆ ದುಡ್ಡು ಇರಲಿಲ್ಲ. ವಿದ್ಯಣ್ಣ ಅವರೇ ಉಚಿತವಾಗಿ ಫೋಟೊ ತೆಗೆದು ನನಗೆ ನೆರವಾದರು. ಹೀಗೆ ಅನೇಕ ಮಂದಿಗೆ ಇವರು  ನೆರವಾಗುತ್ತಿದ್ದಾರೆ’ ಎನ್ನುತ್ತಾರೆ ಅಂಗವಿಕಲ ಡೊಂಬಿ ಬಸವರಾಜ್.

‘ಅಸಹಾಯಕರ ನೆರವಿಗಾಗಿ ಅಳಿಲು ಸೇವೆ ಮಾಡುತ್ತಿರುವ ಇವರ ಕಾಯಕ  ಇತರರಿಗೆ ಮಾದರಿಯಾಗಿದೆ. ಇಂಥವರ ಸಂಖ್ಯೆ ಸಾವಿರವಾಗಲಿ ಎನ್ನುತ್ತಾರೆ’ ವಿರಕ್ತಮಠದ ಫ್ರಭುಸ್ವಾಮೀಜಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.