`ಗದ್ದುಗೆ ಮೇಲಿಂದ ಎದ್ದು ಬಾರೇ
ಹೊನ್ನಮ್ಮ ಬರದಿದ್ದರೆ ಶಿವನಾಣೆ
ಶಿವಗಂಗೆಯಿಂದ ಮಲ್ಲಿಗೆ ಬಂದಾವೆ
ಮುಡಿಬಾರೆ ..... ಹೊನ್ನಮ್ಮ .....~
ಇಂತಹ ಜನಪದ ಗೀತೆಯೊಂದಿಗೆ ಮನೆಮಾತಾಗಿರುವ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನಶಿವರದ ಗ್ರಾಮದೇವತೆ ಹೊನ್ನಮ್ಮನ ಜಾತ್ರೆಯು ಇಂದು ಆರಂಭವಾಗಿ 5 ದಿನ ನಡೆಯುತ್ತದೆ.
ಐತಿಹ್ಯದಂತೆ ಶಿವಗಂಗೆಯಿಂದ ಈ ಊರಿಗೆ ಬಂದು ನೆಲೆಗೊಂಡಿರುವ ಶ್ರೀ ಹೊನ್ನಾದೇವಿ ಸೌಮ್ಯ ಸ್ವಭಾವದ ಶಕ್ತಿದೇವತೆ. ಈಕೆಯ ದೇವಾಲಯ ಸುಂದರವಾಗಿದ್ದು ನೋಡುಗರ ಕಣ್ಮನ ಸೆಳೆಯುವ ಎತ್ತರವಾದ ರಾಜಗೋಪುರವನ್ನು ಹೊಂದಿದೆ.
ಜಾತ್ರೆಗೆ ಹದಿನೈದು ದಿನಕ್ಕೆ ಮುಂಚೆ ಇಲ್ಲಿ `ಕಂಬ~ ಹಾಕುವ ಆಚರಣೆ ರೂಢಿಯಲ್ಲಿದೆ. ಹತ್ತಿ ಮರದ ಮೂರು ಕವಲೊಡೆದ ಕೊಂಬೆಯೊಂದನ್ನು ಕಡಿದು ತಂದು, ಮಂಟಪದಲ್ಲಿ ಪ್ರತಿಷ್ಠಾಪಿಸುತ್ತಾರೆ.
ಈ ಕಂಬ ಹಾಕಿ, ಕೀಳುವವರೆಗೂ ಈ ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಜನರ್ಯಾರೂ ಮಾಂಸಾಹಾರ ಸೇವಿಸುವುದಿಲ್ಲ. ಅಷ್ಟೇ ಏಕೆ? ಕೋಳಿಮೊಟ್ಟೆಯನ್ನೂ ಸಹ ತಿನ್ನುವುದಿಲ್ಲ. ಯಾವುದೇ ಶುಭ ಕಾರ್ಯ ನಡೆಸುವುದಿಲ್ಲ. ಇದು ಬಹಳ ವರ್ಷದಿಂದಲೂ ನಡೆದು ಬರುತ್ತಿರುವ ಸಂಪ್ರದಾಯ. ಈ ಗ್ರಾಮಗಳ ಜನ ಪರಸ್ಥಳದಲ್ಲಿ ಇದ್ದರೂ ಈ ಪದ್ಧತಿಯನ್ನು ಪಾಲಿಸುತ್ತಾರೆ.
ಕಂಬ ಹಾಕುವುದರ ಸಂಕೇತ ಹೊನ್ನಮ್ಮನಿಗೆ ಮಗು ಜನಿಸುವುದು ಎನ್ನುತ್ತಾರೆ ಇಲ್ಲಿನ ಜನ. ಕಂಬ ವಿಸರ್ಜಿಸಿದಾಗ ಮಗು ಮರಣ ಹೊಂದುತ್ತದೆಂದು ತಿಳಿಯಲಾಗುತ್ತದೆ.
ಜಾತ್ರೆಯ ಮೊದಲ ದಿನ (ಏ. 24) ರಾತ್ರಿ ನಡೆಯುವ `ಮಡೆ ಉತ್ಸವ~ ಬಹಳ ಆಕರ್ಷಣೀಯ.
ಹರಕೆ ಹೊತ್ತ ನೂರಾರು ಭಕ್ತಾದಿಗಳು ಹೊಸ ಮಡಿಕೆಯಲ್ಲಿ ಬೇಯಿಸಿದ ಅನ್ನವನ್ನು ತಲೆಯ ಮೇಲೆ ಹೊತ್ತು ಸಾಲಾಗಿ ನಡೆಯುತ್ತಾರೆ. ಹೊನ್ನಮ್ಮನ ಉತ್ಸವಮೂರ್ತಿಯ ಹಿಂದೆ ಗಡಿಗೆ ಹೊತ್ತ ಭಕ್ತರ ಸಾಲು ನೋಡುವುದೇ ಬಲು ಸೊಗಸು. ನಂತರ ದೇವಾಲಯದಲ್ಲಿಟ್ಟ ಮಡೆ ಅನ್ನವನ್ನು ಹೊನ್ನಮ್ಮ ಮತ್ತು ಏಳು ಸಹೋದರಿಯರು ಊಟ ಮಾಡುತ್ತಾರೆಂಬುದು ಜನಪದದ ಕಥೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.