ADVERTISEMENT

ನೋಡಲಾ ವರ್ಕಲಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST
ನೋಡಲಾ ವರ್ಕಲಾ
ನೋಡಲಾ ವರ್ಕಲಾ   

`ಪಾಪನಾಶ ಮಾಡುವ ಕಡಲ ತಡಿ~ ಎಂದು ಪ್ರಸಿದ್ಧವಾಗಿದೆ ಈ ಸಮುದ್ರ. ಕೇರಳದ ತಿರುವನಂತಪುರದಿಂದ 57 ಕಿ.ಮೀ ದೂರದಲ್ಲಿ ಇರುವ ವರ್ಕಲಾ ಊರಿನಲ್ಲಿ ಇರುವ ಈ ಸುಂದರ ಶರಧಿ ಕಣ್ಮನ ತಣಿಸುವಂತಿದೆ.

ಇಲ್ಲಿನ ಶುದ್ಧನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ, `ಪಾಪ ಕಳೆದುಹೋಯಿತು~ ಎಂದು ನಂಬುವವರಿದ್ದಾರೆ. ಆದ್ದರಿಂದಲೇ ಈ ಪ್ರದೇಶಕ್ಕೆ `ಪಾಪನಾಶಂ ಸಮುದ್ರ~ ಎಂಬ ಹೆಸರು. 

ತೀರದ ಪಕ್ಕದಲ್ಲಿಯೇ 2000 ಸಾವಿರ ವರ್ಷದ ಹಳೆಯ ವಿಷ್ಣು ದೇವಾಲಯ ಮತ್ತು `ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು~ ಎಂಬ ಸಂದೇಶ ಸಾರಿದ ಶ್ರೀ ನಾರಾಯಣ ಗುರು ಅವರ ಶಿವಗಿರಿ ಮಠವೂ ಇದೆ. ಕೊಲ್ಲಂನಿಂದ 37 ಕಿ.ಮೀ ಅಂತರದಲ್ಲಿ ಇರುವ ಈ ಸಮುದ್ರ ತೀರಕ್ಕೆ ರೆಸಾರ್ಟ್‌ಗಳಿಂದ ಆಧುನಿಕ ಕಳೆ ಬಂದಿದೆ.

ನಗರ ಜೀವನದಿಂದ ಬೇಸತ್ತ ಮನಗಳು ಈ ಶರಧಿ ಕರೆಯನ್ನು ಒಲ್ಲೆ ಎನ್ನಲಾರವು. ಈ ಸಮುದ್ರ ತೀರಕ್ಕೆ ಪ್ರವಾಸಿಗರ ಹಿಂಡೇ ಬರುತ್ತದೆ. ಅಲ್ಲದೇ ಶಿವಗಿರಿ ಮಠ ಮತ್ತು ನಾರಾಯಣ ಗುರುಗಳ ಸಮಾಧಿ ಸ್ಥಳಕ್ಕೆ ಬರುವ ಪ್ರವಾಸಿಗರೂ ಕೂಡ ಇಲ್ಲಿಗೆ ಭೇಟಿ ನೀಡಿಯೇ ಹೋಗುತ್ತಾರೆ.

ಶಿವಗಿರಿ ಮಠದಲ್ಲಿ ಡಿ. 31ಮತ್ತು.ಜ.1ರಂದು ನಡೆಯುವ ಉತ್ಸವದ ಸಂದರ್ಭದಲ್ಲಿ ಸಮುದ್ರ ತೀರದುದ್ದಕ್ಕೂ ಜನಜಂಗುಳಿ ಇರುತ್ತದೆ. ಸಾಕಷ್ಟು ಸುಸಜ್ಜಿತ ವಸತಿ ಗೃಹಗಳು, ಹೆಲ್ತ್ ರೆಸಾರ್ಟ್‌ಗಳು, ಆಯುರ್ವೇದಿಕ್ ಕೇಂದ್ರಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.