ADVERTISEMENT

ಇನ್ನೊಂದು ಮುತ್ತಿನ ಕಥೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

‘ನಮಗೆ ಒಳ್ಳೆಯದನ್ನು ಮಾಡಿದವರಿಗೆ ನಾವು ಒಳ್ಳೆಯದನ್ನೇ ಮಾಡಬೇಕು; ಕೆಟ್ಟದು ಮಾಡಿದವರಿಗೂ ನಾವು ಒಳ್ಳೆಯದನ್ನೇ ಮಾಡಬೇಕು’. ಇದು ಅಣ್ಣಾವ್ರು ಹೇಳಿದ ನೀತಿ ಮಾತು. ಇದೇ ಸಂದೇಶ ತಮ್ಮ ಚಿತ್ರದಲ್ಲೂ ಇದೆ ಎನ್ನುವುದು ‘ನಂ ಮುತ್ತು’ ಸಿನಿಮಾದ ನಿರ್ದೇಶಕದ್ವಯರ ಸ್ಪಷ್ಟನೆ.

‘ನಂ ಮುತ್ತು’ ತಂಡದಲ್ಲಿ ಇರುವವರಲ್ಲಿ ಬಹುತೇಕರು ಹೊಸಬರು. ಕಿರುತೆರೆ ಧಾರಾವಾಹಿ ಹಾಗೂ ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವುಳ್ಳ ರವಿಚಂದ್ರ ಮತ್ತು ಮಹೇಶ, ಈ ಚಿತ್ರದ ನಿರ್ದೇಶಕರು. ಸುಭಾಷ ಶೆಟ್ಟಿ ಹಾಗೂ ಶಿವರಾಜ್ ನಾಯಕರಾಗಿ ನಟಿಸುತ್ತಿದ್ದು, ರಕ್ಷಾ ಹಾಗೂ ಅರ್ಚನಾ ಸಿಂಗ್ ನಾಯಕಿಯರು.

‘ಹದಿನೈದು ಮಂದಿ ಸ್ನೇಹಿತರು ಸೇರಿ ಬಂಡವಾಳ ಹೂಡಿದ್ದೇವೆ. ಒಂದು ಕೋಟಿ ರೂಪಾಯಿ ಬಜೆಟ್ ಮಾಡಿಕೊಂಡಿದ್ದೇವೆ. ಮಡಿಕೇರಿಯಲ್ಲಿ ಒಂದು ಹಾಡು ಸೇರಿದಂತೆ ಒಟ್ಟು 35 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಇದೊಂದು ಪಕ್ಕಾ ಪ್ರೇಮಕಥೆ. ಒಂದು ಯುವಜೋಡಿಯ ಪ್ರೇಮ ಸುಖಾಂತ್ಯವಾದರೆ ಇನ್ನೊಂದು ಜೋಡಿಯ ಪ್ರೀತಿ ವಿಫಲವಾಗುತ್ತದೆ’ ಎಂದು ನಿರ್ದೇಶಕ ರವಿಚಂದ್ರ ಕಥಾವಸ್ತು ತೆರೆದಿಟ್ಟರು.

‘ಫೀಲಿಂಗ್ಸ್’ ಎಂಬ ಕನ್ನಡ ಅಲ್ಬಂನಲ್ಲಿ ಅಭಿನಯಿಸಿದ ಶಿವರಾಜ್ ಈ ಚಿತ್ರದಲ್ಲಿ ‘ಮುತ್ತು’ ಪಾತ್ರ ವಹಿಸಲಿದ್ದಾರೆ. ಸುಭಾಷ್ ಎರಡನೇ ನಾಯಕ. ಅರ್ಚನಾ ಸಿಂಗ್ ಹಾಗೂ ರಕ್ಷಾ ನಾಯಕಿಯರು. ಹಂಸಲೇಖ ಅವರ ಶಿಷ್ಯರಲ್ಲೊಬ್ಬನಾದ ಲೋಕಿ, ‘ನಂ ಮುತ್ತು’ವಿಗೆ ಸಂಗೀತ ಸಂಯೋಜಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.