‘ತುಘಲಕ್’ ಸಿನಿಮಾಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದಾಗ ತುಂಬಾ ಬೇಸರವಾಯಿತು. ಆದರೆ, ಈಗ ಯೋಚಿಸಿದರೆ ಆ ಸೋಲು ಬೇರೆಯದೇ ಆಗಿ ಕಾಣಿಸುತ್ತದೆ. ಎಲ್ಲರ ಜೀವನದಲ್ಲಿಯೂ ಫ್ಲಾಪ್ ಇದ್ದರೆ ಅದೇ ಮುಂದೊಂದು ದಿನ ಒಳ್ಳೆ ಕಥೆಯ ಹುಟ್ಟಿಗೆ ಕಾರಣವಾಗುತ್ತದೆ. ಇದು ಈ ಚಿತ್ರದ ನಾಯಕ ಅನೀಶ್ ಅವರಿಗೂ ಅನ್ವಯಿಸುತ್ತದೆ. ಅವರ ಬದುಕಿನಲ್ಲಿ ಯಶಸ್ಸಿನ ದಿನಗಳು ಶುರುವಾಗಲಿ’ ಎಂದು ಹಾರೈಸಿದರು ರಕ್ಷಿತ್ ಶೆಟ್ಟಿ.
ರಕ್ಷಿತ್ ಹೀಗೆ ‘ಸೋಲೇ ಗೆಲುವಿನ ಸೋಪಾನ’ವಾಗುವ ಸಂದೇಶವನ್ನು ನೀಡಿದ್ದು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.‘ಅನೀಶ್ ಜತೆ ‘ನಮ್ ಏರಿಯಾದಲ್ ಒಂದಿನ’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಹಲವು ಅವಕಾಶಗಳು ನನಗೆ ದೊರಕಿದ್ದವು. ಅನೀಶ್ ಅವರಿಗೂ ಅಂಥ ಅದೃಷ್ಟದ ಬಾಗಿಲು ತೆರೆಯಲಿ’ ಎಂದು ನಟಿ ಮೇಘನಾ ಗಾಂವ್ಕರ್ ಹಾರೈಸಿದರು.
‘ಅನೀಶ್ ಅವರ ಏಳು–ಬೀಳು, ಬೇಸರ, ಖಿನ್ನತೆ ಎಲ್ಲವನ್ನು 8-9 ವರ್ಷದಿಂದ ನೋಡುತ್ತಾ ಬಂದಿದ್ದೇನೆ. ಈ ಸಿನಿಮಾದಲ್ಲಿ ಪಕ್ಕಾ ಕಮರ್ಷಿಯಲ್ ಹೀರೋ ಆಗಿದ್ದಾನೆ. ಇನ್ನು ಮುಂದಿನ ದಿನಗಳು ಚೆನ್ನಾಗಿರುತ್ತವೆ’ ಎಂಬ ನಂಬಿಕೆಯ ಮಾತನಾಡಿದ್ದು ನಟಿ ಸಿಂಧು ಲೋಕನಾಥ್.
‘ಐಪಿಎಲ್ ಮ್ಯಾಚ್ ಗೆಲ್ಲುತ್ತೋ ಗೊತ್ತಿಲ್ಲ. ಆದರೆ ವಾಸು ಗೆದ್ದೇ ಗೆಲ್ತಾನೆ’ ಅಂತ ಭವಿಷ್ಯ ನುಡಿದರು ‘ಸಿಪಾಯಿ’ ಚಿತ್ರದ ನಾಯಕ ಮಹೇಶ್ ಸಿದ್ದಾರ್ಥ್.
ಈ ಎಲ್ಲರ ಹಾರೈಕೆಗಳಿಂದ ಗಳಿಸಿಕೊಂಡಿದ್ದ ಆತ್ಮವಿಶ್ವಾಸ ಅನೀಶ್ ತೇಜಶ್ವರ್ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ‘ಅಕಿರ’ ಚಿತ್ರದ ಸಂದರ್ಭದಲ್ಲಿಯೇ ನಿರ್ದೇಶಕರು ಈ ಚಿತ್ರದ ಕಥೆಹೇಳಿದ್ದರು. ಅದನ್ನೇ ಬೆಳೆಸಿಕೊಂಡು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಮಾಡಿದ್ದೇವೆ. ಎಲ್ಲರೂ ಕಷ್ಟಪಟ್ಟು ಮಾಡಿರುವ ಸಿನಿಮಾ ಇದು. ನಿಶ್ಚಿಕಾ ನಾಯ್ಡು ಅಂಥ ಅಪ್ಪಟ ಕನ್ನಡ ಪ್ರತಿಭೆಯನ್ನು ಪರಿಚಯಿಸಿದ ಖುಷಿಯೂ ಇದೆ’ ಎಂದರು ಅನೀಶ್. ಅವರೇ ಈ ಚಿತ್ರಕ್ಕೆ ಹಣವನ್ನೂ ಹೂಡಿದ್ದಾರೆ. ನಿಶ್ಚಿಕಾ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಅಷ್ಟೇ ಹೇಳಿ ಸುಮ್ಮನಾದರು. ಅಜನೀಶ್ ಲೋಕನಾಥ್ ಸಂಗೀತ, ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ⇒v
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.