ADVERTISEMENT

ಕುವೆಂಪು ನೆನಪು

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಕುವೆಂಪು ಅವರ ಕುರಿತಾದ ಸಾಹಿತ್ಯ ಸಂವಾದಗಳು, ಚರ್ಚೆಗಳು, ಕವಿಗೋಷ್ಠಿಗಳು... ಹೀಗೆ ಸದಾ ಏನಾದರೊಂದು ಕಾರ್ಯಕ್ರಮಗಳು ಬೆಂಗಳೂರು ಮಹಾನಗರಿಯಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಅತ್ಯಂತ ವಿಶೇಷವೆನಿಸುವ ಕಾರ್ಯಕ್ರಮವೊಂದು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಭಾಗವತರು, ಸ್ವರಸನ್ನಿಧಿ ಟ್ರಸ್ಟ್, ಬಾಗೂರು ಕಲಾ ವೇದಿಕೆ, ಗಾಯನ ಗಂಗಾ, ಕಲಾದೇಗುಲ ಹೀಗೆ ಐದು ಸಂಸ್ಥೆಗಳು ಒಟ್ಟು ಸೇರಿ ಕಾರ್ಯಕ್ರಮವೊಂದನ್ನು ಮಾಡಿದ್ದು ಅರ್ಥಪೂರ್ಣವಾಗಿತ್ತು.

ಕುವೆಂಪು ಅವರ ಭಾವಗೀತೆಗಳು, ಹೊಸ ಸಂಗೀತ ನಿರ್ದೇಶಕರು ಸ್ವರಸಂಯೋಜನೆ ಮಾಡಿದ ಕುವೆಂಪು ವಿರಚಿತ ಗೀತೆಗಳು, ಹೊಸ ಪ್ರತಿಭೆಗಳು, ಹಳೆಬೇರು ಹೊಸ ಚಿಗುರು ಎನ್ನುವಂತೆ ನಾಡಿನ ಖ್ಯಾತ ನಾಮಾಂಕಿತ ಗಾಯಕ ಗಾಯಕಿಯರು ಹಾಡಿದುದೇ ಅಲ್ಲದೇ ಗಾಯನದ ಭಾವಕ್ಕೆ ಪೂರಕವಾಗುವಂತೆ ಚಿತ್ರಗಳನ್ನು ಬಾಗೂರು ಮಾರ್ಕಾಂಡೇಯ ಸ್ಥಳದಲ್ಲೇ ರಚಿಸಿದ್ದು ಗಮನಾರ್ಹವಾಗಿತ್ತು.

ಕಾರ್ಯಕ್ರಮದ ಅತಿಥಿಗಳಾಗಿ ಕುವೆಂಪು ಪುತ್ರಿ ತಾರಿಣಿ ಚಿದಾನಂದ, ಅಳಿಯ ಡಾ. ಚಿದಾನಂದಗೌಡ ಹಾಗೂ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪನವರು ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕುವೆಂಪು ರಚಿಸಿದ ‘ಸ್ಮಶಾನ ಕುರುಕ್ಷೇತ್ರ’ ನಾಟಕ ಪ್ರದರ್ಶಿಸಲಾಯಿತು. ಈ ನಾಟಕದ ರಂಗಪಠ್ಯವನ್ನು ಡಾ. ಜಿ. ಎಸ್. ಶಿವರುದ್ರಪ್ಪ ಸಿದ್ಧಪಡಿಸಿದ್ದರು. ಜನ ಕಿಕ್ಕಿರಿದು ತಂಬಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಹಿತ್ಯ ಸಂಜೆಯ ಇಂಪು ಹರಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.