ADVERTISEMENT

ಕ್ರಿಕೆಟ್ ನೋಡದವರ ಐಪಿಎಲ್ ಶೋ!

ಕೆ.ಓಂಕಾರ ಮೂರ್ತಿ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಕ್ರಿಕೆಟ್ ಪ್ರೇಮಿಗಳ ಕೆನ್ನೆ, ಹಣೆಯ ಮೇಲೆ ಚಿತ್ರ ಬಿಡಿಸಿ, ಧ್ವಜ ಮಾರಿ ಜೀವನ ಸಾಗಿಸುವವರು ಎಲ್ಲೆಲ್ಲಿಂದಲೋ ಬಂದವರು. ಜನರ ಕ್ರಿಕೆಟ್ ಪ್ರೀತಿಯೇ ಇವರ ಊಟಕ್ಕೆ ದಾರಿ. ಐಪಿಎಲ್ ಇಂಥ ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಳ್ಳುವ ಮಾರ್ಗವಾಗಿದೆ.

ಕ್ರಿಕೆಟ್ ಉಳ್ಳವರ ಪಾಲಿಗೆ ಮನರಂಜನೆಯ ನೋಟ. ಬಾಜಿ ಕಟ್ಟುವವರಿಗೆ ಅದು ಚಿನ್ನದ ಮೊಟ್ಟೆ ಇಡುವ ಕೋಳಿ. ಕೆಲವರಿಗೆ ತುತ್ತು ಅನ್ನ ಕೊಡುವ ಉತ್ಸವ. ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವ ಹಾದಿ. ಕ್ರಿಕೆಟ್‌ನಿಂದ ಸಂಘಟಕರು, ಆಟಗಾರರು, ಕಂಪೆನಿಗಳು ಮಾತ್ರ ಹಣ ಗಳಿಸುತ್ತಿಲ್ಲ.

  ಕ್ರೀಡಾಂಗಣದ ಹೊರಗೆ ಏನನ್ನೋ ಮಾರಾಟ ಮಾಡಿ ಅದರಿಂದ ಬರುವ ಹಣದಿಂದಲೇ ವರ್ಷಪೂರ್ತಿ ಜೀವನ ಸಾಗಿಸುವ ಅದೆಷ್ಟೋ ಮಂದಿ ಇದ್ದಾರೆ. ಇವರ ಕುಟುಂಬ ಸಾಗುವುದೇ ಈ ಹಣದಿಂದ.

ಐಪಿಎಲ್ ಎಂದರೆ ಇವರಿಗೆ ಸುಗ್ಗಿ. ಉದ್ಯಾನನಗರಿಯಲ್ಲಿ ಅಂಥ ಏಳೆಂಟು ಮಂದಿ ಮಾರಾಟಗಾರರನ್ನು ಈಗ ಕಾಣಬಹುದು. ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ರಾಜಸ್ತಾನದಿಂದಲೂ ಇಲ್ಲಿಗೆ ಬಂದು ಮಾರುತ್ತಾರೆ. ಅವರು ಒಂದು ದಿನ ಬೆಂಗಳೂರಿನಲ್ಲಿದ್ದರೆ, ಇನ್ನೊಂದು ದಿನ ಚೆನ್ನೈನಲ್ಲಿರುತ್ತಾರೆ.

ಮತ್ತೊಂದು ದಿನ ವಿಶಾಖಪಟ್ಟಣದತ್ತ ಮುಖ ಮಾಡುತ್ತಾರೆ.
ಸಾದಿಕ್ ಬದುಕುತ್ತಿರುವುದು ಕೆ.ಆರ್.ಪುರಂ ಬಳಿಯ ರೈಲ್ವೆ ಟ್ರ್ಯಾಕ್ ಪಕ್ಕದ ಗುಡಿಸಲಿನಲ್ಲಿ. ಅವರ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಅವರದ್ದು ಏಕಾಂಗಿ ಜೀವನ. ಪೋಷಕರೂ ಇಲ್ಲ. ದುಡಿದು ತಂದು ಹಾಕುವವರೂ ಇಲ್ಲ. ಕ್ರಿಕೆಟ್ ಪಂದ್ಯವಿದ್ದಾಗ ಗಾಲಿಚಕ್ರದ ಮೇಲೆಯೇ ಕುಳಿತು ಬಾವುಟ ಮಾರುತ್ತಾರೆ.

ಒಂದು ಪಂದ್ಯ ನಡೆದರೆ ಅವರ ಮೂರು ತಿಂಗಳ ಊಟಕ್ಕೆ ಚಿಂತೆ ಇಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸಮಾರಂಭಗಳಿಗೂ ತೆರಳಿ ರಾಷ್ಟ್ರಧ್ವಜ ಮಾರುತ್ತಾರೆ. ಅಣ್ಣಾ ಹಜಾರೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ಫ್ರೀಡಂಪಾರ್ಕ್ ಬಳಿ ಇದೇ ಸಾದಿಕ್ ಧ್ವಜ ಮಾರುತ್ತಿದ್ದರು.

ಹಾಗೆ ನೋಡಿದರೆ ಕ್ರೀಡಾಂಗಣದ ಹೊರಗೆ ಟಿ-ಶರ್ಟ್, ಬಾವುಟ ಮೊದಲಾದವನ್ನು ಮಾರುವವರಲ್ಲಿ ಕರ್ನಾಟಕದವರು ಕಡಿಮೆ. ಹೆಚ್ಚಿನವರು ಬೇರೆ ಬೇರೆ ರಾಜ್ಯಗಳಿಂದ ಬಂದು ತಮ್ಮ ಬದುಕು ಹೆಣೆಯುತ್ತಿದ್ದಾರೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರೂವರೆ ಗಂಟೆಯ ಒಂದು ಐಪಿಎಲ್ ಪಂದ್ಯಕ್ಕೆ 55 ಸಾವಿರ ರೂ.

ನೀಡಿ ವೀಕ್ಷಿಸುವವರೂ ಇದ್ದಾರೆ. ಇದೇ ಕ್ರೀಡಾಂಗಣದ ಹೊರಗೆ ಬಾವುಟ, ಟಿ-ಶರ್ಟ್, ಟೋಪಿ, ರಿಸ್ಟ್ ಬ್ಯಾಂಡ್, ಪುಗ್ಗ, ಪೀಪಿ, ತಿಂಡಿ-ತಿನಿಸು, ತಂಪು ಪಾನೀಯ ಮಾರಿ, ಚಿಕ್ಕಾಸನ್ನೇ ಒಟ್ಟುಗೂಡಿಸಿಕೊಂಡು ಜೀವನ ಸಾಗಿಸುವವರೂ ಇದ್ದಾರೆ.

ಬಿಹಾರದ ನಿಖಿಲ್ ಮಂಡಲ್ ಐಪಿಎಲ್ ಪಂದ್ಯಕ್ಕಾಗಿ ಉದ್ಯಾನನಗರಿಗೆ ಬಂದಿದ್ದಾರೆ. ಇವರು ಕ್ರಿಕೆಟ್ ಪ್ರೇಮಿಗಳ ಮುಖಕ್ಕೆ ಬಗೆಬಗೆಯ ಬಣ್ಣ ಬಳಿದು, ಹಣ ಗಳಿಸುತ್ತಾರೆ. ಕೆನ್ನೆಯ ಎರಡೂ ಬದಿಗೆ ಆರ್‌ಸಿಬಿ ಎಂದು ಬರೆದರೆ 15 ರೂಪಾಯಿ. ಬೆನ್ನು, ಕೈ, ಎದೆ ಮೇಲೂ ಚಿತ್ರ ಬಿಡಿಸುತ್ತಾರೆ.

`ಒಂದು ಪಂದ್ಯದಲ್ಲಿ ಕನಿಷ್ಠ 30-35 ಮಂದಿಯ ಮುಖಕ್ಕೆ ಬಣ್ಣ ಹಚ್ಚುತ್ತೇನೆ. 500 ರೂಪಾಯಿ ದುಡಿಯುತ್ತೇನೆ. ಐಪಿಎಲ್‌ನ ಎಲ್ಲಾ ಪಂದ್ಯಗಳು ಮುಗಿಯುವವರೆಗೆ ಇಲ್ಲಿರುತ್ತೇನೆ~ ಎನ್ನುವ ಮಂಡಲ್ ಮುಖದಲ್ಲಿ ಮಂದಹಾಸ.

ಅವರಿಗೆ ಯಾವ ತಂಡ ಗೆದ್ದರೇನು? ಟೂರ್ನಿ ಮುಗಿಯುವುದರೊಳಗೆ ಏಳೆಂಟು ಸಾವಿರ ರೂ. ಜೇಬು ಸೇರಿರುತ್ತದೆ ಅಷ್ಟೆ. ಆದರೆ ಕ್ರಿಕೆಟ್ ಇ್ಲ್ಲಲದಿದ್ದಾಗ ಅವರು ನಿರುದ್ಯೋಗಿ. `ನಾನು ವಾಪಸ್ ಊರಿಗೆ ಹೋಗುತ್ತೇನೆ. ಅಲ್ಲಿ ಕೂಲಿ ಮಾಡಿ ಬದುಕುತ್ತೇನೆ. ಆದರೆ ಆ ಹಣ ಯಾವುದಕ್ಕೂ ಸಾಲುವುದಿಲ್ಲ~ ಎನ್ನುತ್ತಾರೆ ನಿಖಿಲ್.

ನಿಖಿಲ್ ಕ್ರಿಕೆಟ್ ಅಭಿಮಾನಿಗಳ ಮುಖದ ಮೇಲೆ ಬಿಡಿಸುವ ಚಿತ್ರ, ಬಣ್ಣಬಣ್ಣದ ತಲೆಕೂದಲಿನ ವಿಗ್, ಬಾವುಟ ಕ್ರಿಕೆಟ್‌ಗೆ ಭಾವನಾತ್ಮಕ ಬೆಂಬಲ ತುಂಬುತ್ತವೆ. ಟೀವಿಯಲ್ಲೂ ಇವರ ಕೈಚಳಕವನ್ನು ಪದೇಪದೇ ತೋರಿಸುತ್ತಾರೆ.

`ನನ್ನ ಪೋಷಕರು ಈ ಮೊದಲು ಹೌರಾದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರು. ನಮಗೆ ಮೊದಲು ಮನೆ ಇರಲಿಲ್ಲ. ತಂದೆ ಆರೋಗ್ಯ ಸರಿ ಇಲ್ಲ. ಅಕ್ಕನ ಮದುವೆ ಮಾಡಲೂ ಸಾಧ್ಯವಾಗಿರಲಿಲ್ಲ. ನಾನು ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಅದರಿಂದ ಕುಟುಂಬ ಸಾಕಲು ಕಷ್ಟವಾಯಿತು. ಕ್ರಿಕೆಟ್ ನನಗೆ ತುಂಬಾ ಇಷ್ಟ.

ಒಮ್ಮೆ ಪಂದ್ಯ ವೀಕ್ಷಿಸಲು ಈಡನ್ ಗಾರ್ಡನ್ಸ್‌ಗೆ ಹೋಗಿದ್ದೆ. ಟಿಕೆಟ್ ಸಿಗಲಿಲ್ಲ. ಏನಾದರೂ ಮಾರಾಟ ಮಾಡಿ ಜೀವನ ನಡೆಸಬಹುದು ಎನಿಸಿತು. ಹಾಗನ್ನಿಸಿ ಹತ್ತು ವರ್ಷ ಕಳೆದಿದೆ. ಅದೇ ಕೊಳೆಗೇರಿಯಲ್ಲಿ ಈಗ ಮನೆ ಕಟ್ಟ್ದ್ದಿದೇನೆ. ಅಕ್ಕನ ಮದುವೆ ಮಾಡಿದ್ದೇನೆ~ ಎಂದು ಜಾಯೀದ್ ಹುಸೇನ್ ಹೆಮ್ಮೆಯಿಂದ ಹೇಳುತ್ತಾರೆ. ಅವರೀಗ ಐಪಿಎಲ್‌ನಿಂದಾಗಿ ಬೆಂಗಳೂರಲ್ಲಿದ್ದಾರೆ.

ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಯಾವುದೇ ಕ್ರಿಕೆಟ್ ಇರಲಿ. ಕೇವಲ ಧ್ವಜದ ಚಿತ್ರ, ತಂಡದ ಹೆಸರು ಮಾತ್ರವಲ್ಲ; ಕೆಲವು ಪ್ರೇಕ್ಷಕರು ಆಟಗಾರರ ಹೆಸರು, ತಮ್ಮ ಪ್ರೀತಿಪಾತ್ರರ ಹೆಸರನ್ನು ಕೂಡ ಬರೆಸಿಕೊಳ್ಳುತ್ತಾರೆ. ಕ್ಯಾಮೆರಾ ಕಣ್ಣು ತಮ್ಮತ್ತ ದೃಷ್ಟಿ ಹರಿಸಲಿ ಎಂಬುದು ಅವರ ಆಸೆ.

ಆಟಗಾರರ ಹೆಸರಿರುವ ಟಿ-ಶರ್ಟ್‌ಗಳಿಗೆ ಭಾರಿ ಬೇಡಿಕೆ. ಅದರ್ಲ್ಲಲೂ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಹೆಸರಿರುವ ಶರ್ಟ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಹುಡುಗಿಯರೂ ಖರೀದಿಸುತ್ತಿದ್ದಾರೆ. ಟಿ-ಶರ್ಟ್‌ಗಳ ಬೆಲೆ 150ರಿಂದ 500ರೂ.ವರೆಗಿದೆ. ಕ್ಯಾಪ್‌ಗಳ ಬೆಲೆ 50ರಿಂದ 300 ರೂ.ವರೆಗೆ. ಧ್ವಜದ ಬೆಲೆ 30 ರೂ, ರಿಸ್ಟ್ ಬ್ಯಾಂಡ್ 25ರಿಂದ 100 ರೂ.ಗೆ ಮಾರಾಟ ಮಾಡುತ್ತಾರೆ.

ಈ ಹಿಂದೆ ಕ್ರೀಡಾಂಗಣದೊಳಗೆ ತೆರಳಿ ಮಾರಾಟ ಮಾಡಲು ಅವಕಾಶ ನೀಡುತ್ತಿದ್ದರು. ಆದರೆ ಭದ್ರತೆಯ ದೃಷ್ಟಿಯಿಂದ ಒಳಗೆ ಹೋಗಿ ಮಾರಾಟ ಮಾಡಲು ಈಗ ಎಲ್ಲರಿಗೂ ಅವಕಾಶ ನೀಡುವುದಿಲ್ಲ. ಹಾಗಾಗಿ ಇವರೆಲ್ಲಾ ಪಂದ್ಯ ಆರಂಭವಾಗುವ ಮೂರು ಗಂಟೆ ಮೊದಲೇ ಕಬ್ಬನ್ ಪಾರ್ಕ್ ಪ್ರವೇಶದ್ವಾರ, ಕ್ವೀನ್ಸ್ ರಸ್ತೆ, ಅನಿಲ್ ಕುಂಬ್ಳೆ ಸರ್ಕಲ್, ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬಂದು ನಿಂತುಕೊಂಡಿರುತ್ತಾರೆ.

ಅನಿಲ್ ಕುಂಬ್ಳೆ ವೃತ್ತದಿಂದ ಕ್ರೀಡಾಂಗಣಕ್ಕೆ ಹೋಗುವ ಪಾದಚಾರಿ ರಸ್ತೆಯಲ್ಲಿ ಈಗ ಏನನ್ನೂ ಮಾರಾಟ ಮಾಡಲು ಬಿಡುತ್ತಿಲ್ಲ. ಅಲ್ಲೊಂದು ಪುಟ್ಟ ಉದ್ಯಾನವನವಿದ್ದು, ಖರೀದಿಸುವ ಭರಾಟೆಯಲ್ಲಿ ಜನ ಗಿಡಗಳನ್ನು ತುಳಿದುಹಾಕಬಹುದೆಂಬುದು ಅಲ್ಲಿನ ಭದ್ರತಾ ಸಿಬ್ಬಂದಿಯ ಆತಂಕ.

ಕಬ್ಬಿನ ಜ್ಯೂಸ್, ಲಿಂಬೂ ಜ್ಯೂಸ್, ಸಮೋಸಾ, ಕಡ್ಲೆಕಾಯಿ, ಸಿಗರೇಟು, ಗುಟ್ಕಾ ಮಾರುವವರಿಗೂ ಇದು ಸುಗ್ಗಿ ಕಾಲ. ಕ್ರೀಡಾಂಗಣದೊಳಗೆ ಹೆಲ್ಮೆಟ್ ತೆಗೆದುಕೊಂಡು ಹೋಗಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಹಾಗಾಗಿ ಹೆಲ್ಮೆಟ್ ಇಟ್ಟುಕೊಳ್ಳುವ ಒಂದು ಸ್ಟಾಲ್ ಕೂಡ ಇದೆ. ಒಂದು ಹೆಲ್ಮೆಟ್ ಇಡಲು 30 ರೂ. ನೀಡಬೇಕು. ಇವರಿಗೆ ಮಾತ್ರವಲ್ಲ; ಐಪಿಎಲ್ ಇದ್ದಾಗ ರೆಸ್ಟೋರೆಂಟ್‌ಗಳು, ಬಾರ್‌ಗಳಿಗೆ ಲಾಭ.

ಜೈಪುರದ ನಿತೇಶ್ ಸಹೋದರರು ಹಾಗೂ ಸಹೋದರಿಯೂ ಇದೇ ಕೆಲಸ ಮಾಡುತ್ತಿದ್ದಾರೆ. ಅವರು ಯಾವತ್ತೂ ಒಂದೇ ಜಾಗದಲ್ಲಿ ಮಾರಾಟ ಮಾಡುವುದಿಲ್ಲ.
`ನಾನು 15 ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡ್ದ್ದಿದೇನೆ.
 
ಪಂದ್ಯವಿದ್ದಾಗ ರೈಲಿನಲ್ಲಿ ಬಂದು ಕ್ರೀಡಾಂಗಣದ ಸಮೀಪ ಉಳಿದುಕೊಳ್ಳುತ್ತೇನೆ. ಈಗ ಐಪಿಎಲ್ ಕಾರಣ ಬೆಂಗಳೂರಿಗೆ ಬಂದಿದ್ದೇನೆ. ಈ ಟೂರ್ನಿ ಮುಗಿಯುವವರೆಗೆ ಇಲ್ಲಿಯೇ ಇರುತ್ತೇನೆ. ಎಲ್ಲಾ ಖರ್ಚು ಕಳೆದು ಏಳೆಂಟು ಸಾವಿರ ಬಂದರೂ ಸಾಕು~ ಎನ್ನುತ್ತಾರೆ ಕೋಲ್ಕತ್ತದ ನೀಲಾಂಕುರ್.

`ಉಳಿದ ನಗರಗಳಿಗೆ ಹೋಲಿಸಿದರೆ ನಾವಿಲ್ಲಿ ಹೆಚ್ಚು ಹಣ ಗಳಿಸಬಹುದು. ಬೇರೆ ರಾಜ್ಯಗಳಲ್ಲಿ ಕ್ರಿಕೆಟ್ ಬಗ್ಗೆ ಇಷ್ಟು ಹುಚ್ಚಿಲ್ಲ. ಜೊತೆಗೆ ಬೇರೆ ರಾಜ್ಯಗಳಲ್ಲಿ ತುಂಬಾ ಮಂದಿ ಮಾರಾಟಗಾರರು ಇದ್ದಾರೆ. ಆದ್ದರಿಂದ ಅಲ್ಲಿ ಹೆಚ್ಚು ಹಣ ಗಳಿಸಲು ಸಾಧ್ಯವಾಗುವುದಿಲ್ಲ~ ಎಂದು ನುಡಿಯುತ್ತಾರೆ ಪಟ್ನಾದ ಸಂದೇಶ್ ಕೌಲ್.

`ನನಗೆ ಅತಿ ಹೆಚ್ಚು ಲಾಭ ಬಂದಿದ್ದು ಮೊಹಾಲಿಯಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ. ಆ ದಿನ 10 ಸಾವಿರ ರೂ. ದುಡಿದಿದ್ದೆ. ಈಗ ಐಪಿಎಲ್‌ನಲ್ಲಿ ಒಂದು ಪಂದ್ಯಕ್ಕೆ ಎರಡು ಸಾವಿರ ಸಿಗುತ್ತೆ. ಟೂರ್ನಿ ಮುಗಿಯುವುದರೊಳಗೆ ಕನಿಷ್ಠ 20 ಸಾವಿರ ರೂ. ಸಂಪಾದಿಸುತ್ತೇನೆ~ ಎನ್ನುತ್ತಾರೆ ನಾಗಪುರದ ಸಂದೀಪ್ ಕುಂದು.

`ಈ ಸಲ ಯಾಕೋ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡದವರೇ ಕೆಲವೊಮ್ಮೆ ಪ್ರೇಕ್ಷಕರಿಗೆ ಉಚಿತವಾಗಿ ಬಾವುಟಗಳನ್ನು ನೀಡುತ್ತಾರೆ. ಬೇಸಿಗೆಯ ಬಿಸಿಯೂ ಈ ಸಲ ಹೆಚ್ಚು. ಹಾಗಾಗಿ ವ್ಯಾಪಾರ ಸ್ವಲ್ಪ ಡಲ್ಲು~ ಎಂದು ಕಟಕ್‌ನ ಸುಮನ್‌ದೀಪ್ ನಿರಾಶೆ ವ್ಯಕ್ತಪಡಿಸುತ್ತಾರೆ. 

ಎರಡು ತಂಡಗಳ ನಡುವೆ ಆಟ ನಡೆಯುವಾಗ ಒಳಗೆ ಪ್ರೇಕ್ಷಕರು ಮೈಮರೆಯುತ್ತಾರೆ. ಹೊರಗೆ ಬದುಕಿನ ದೀಪ ಹೊತ್ತಿಸುತ್ತಾ ಕನವರಿಕೆ ನೇವರಿಸುವ ಈ ಕರ್ಮಿಗಳ ದಂಡು. ಕ್ರಿಕೆಟ್ ಎಷ್ಟೊಂದು ಜನರ ಉಸಿರಾಟಕ್ಕೆ ಕಾರಣವಾಗಿದೆ ನೋಡಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT