ಎರಡು ಕೋಟಿ ಬಜೆಟ್ನಲ್ಲಿ ತಯಾರಾದ ತೆಲುಗು ಚಿತ್ರ ‘ಪ್ರತಿನಿಧಿ’ ಒಂದು ವಾರದಲ್ಲಿ ಏಳು ಕೋಟಿ ಕಲೆಕ್ಷನ್ ಮಾಡುವ ಮೂಲಕ ಸಿನಿ ಮಾರುಕಟ್ಟೆ ವಿಶ್ಲೇಷಕರಲ್ಲಿ ಅಚ್ಚರಿ ಮೂಡಿಸಿದೆ. ರಾಜಕೀಯ ಕಥಾ ಹಂದರವುಳ್ಳ ‘ಪ್ರತಿನಿಧಿ’ ಚಿತ್ರದ ನಾಯಕನಾಗಿ ನರ ರೋಹಿತ್ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
‘ಪ್ರತಿನಿಧಿ’ ಚಿತ್ರ ಈ ಪರಿ ದುಡ್ಡು ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಬಿಡುಗಡೆಯಾದ ದಿನವೇ ಈ ಚಿತ್ರದ ಗಳಿಕೆ ಎರಡು ಕೋಟಿ ರೂಪಾಯಿ ದಾಟಿತ್ತು. ದಿನದಿಂದ ದಿನಕ್ಕೆ ಕಲೆಕ್ಷನ್ ಉತ್ತಮಪಡಿಸಿಕೊಳ್ಳುತ್ತಿರುವ ಈ ಸಿನಿಮಾ ಮುಂದಿನ ಐದು ದಿನದಲ್ಲಿ ಐದು ಕೋಟಿ ರೂಪಾಯಿ ಹಣ ದೋಚಿ ವಾರಾಂತ್ಯಕ್ಕೆ ಏಳು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಮಾರುಕಟ್ಟೆ ವಿಶ್ಲೇಷಕ ತ್ರಿನಾಥ್.
ಈ ಚಿತ್ರವನ್ನು ಪ್ರಶಾಂತ್ ನಿರ್ದೇಶಿಸಿದ್ದರು. ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯನ್ನು ಅಪಹರಿಸುವುದು ಮತ್ತು ಅದರಿಂದ ಆತ ಎದುರಿಸುವ ಪರಿಣಾಮಗಳ ಸುತ್ತ ಕತೆ ಹೆಣೆಯಲಾಗಿದೆ. ಲೋಕಸಭೆ ಹಾಗೂ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ಪ್ರತಿನಿಧಿ’ ಚಿತ್ರವನ್ನು ಬಿಡುಗಡೆಗೊಳಿಸಿರುವುದರಿಂದ ಈ ಚಿತ್ರ ಜನರನ್ನು ಆಕರ್ಷಿಸಿದೆ ಎಂದಿದ್ದಾರೆ ತ್ರಿನಾಥ್.
‘ಅದ್ಭುತ ಕತೆ ಇದೆ ಎಂದು ಈ ಚಿತ್ರ ಹಿಟ್ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದು ಚಿತ್ರಕ್ಕೆ ವರದಾನವಾಯಿತು. ರಾಜಕೀಯ ಕತೆ ಇದ್ದಿದ್ದರಿಂದ ಜನ ಸ್ವೀಕರಿಸಿದರು. ಈ ಚಿತ್ರ ಅನೇಕ ಮಂದಿ ಮತದಾರರ ಮೇಲೂ ಪರಿಣಾಮ ಬೀರಿದೆ. ಈ ಚಿತ್ರವನ್ನು ನೋಡಿದ ಅನೇಕರು ತಮ್ಮ ನೇತಾರ ಹೇಗಿರಬೇಕು ಎಂದು ನಿರ್ಧರಿಸಿ ಮತದಾನ ಮಾಡಿದ್ದಾರೆ’ ಎಂದಿದ್ದಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.