ADVERTISEMENT

‘ಧೈರ್ಯಂ’ ಸರ್ವತ್ರ ಸಾಧನಂ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
‘ಧೈರ್ಯಂ’ ಸರ್ವತ್ರ ಸಾಧನಂ
‘ಧೈರ್ಯಂ’ ಸರ್ವತ್ರ ಸಾಧನಂ   

‘ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಇದು ಹೊಸ ಪ್ರಯತ್ನವೂ ಹೌದು. ಚಿತ್ರದ ಪ್ರತಿ ಹಂತದಲ್ಲೂ ಧೈರ್ಯ ಹೆಚ್ಚುತ್ತಲೇ ಇದೆ’ ಎಂದ ನಟ ಅಜಯ್‌ ರಾವ್‌ ಅವರ ಮಾತುಗಳಲ್ಲಿ ಧೈರ್ಯದ ಜತೆ ವಿಶ್ವಾಸವೂ ಎದ್ದುಕಾಣುತ್ತಿತ್ತು.

‘ಧೈರ್ಯಂ’ ಚಿತ್ರದ ಟೀಸರ್‌ ಬಿಡುಗಡೆ ಸಂದರ್ಭದಲ್ಲಿ ಅವರು ಚಿತ್ರ ತಂಡದ ಶ್ರಮದ ಬಗ್ಗೆ ಮೆಚ್ಚುಗೆಯ ಮಳೆ ಸುರಿಸಿದರು.

‘ನನ್ನ ಎಲ್ಲ ಚಿತ್ರಗಳಿಗಿಂತಲೂ ಈ ಸಿನಿಮಾ ವಿಭಿನ್ನವಾಗಿದೆ’ ಎಂದ ಅವರು, ‘ಧೈರ್ಯಂ ಸರ್ವತ್ರ ಸಾಧನಂ’ ಎಂದು ಉದ್ಗರಿಸಿದರು. ನಾಯಕಿ ಅದಿತಿ ಅವರಿಗೆ ಇದು ಮೊದಲ ಚಿತ್ರ. ಅದೇ ಉತ್ಸಾಹದಲ್ಲಿ ಅವರು ವೇದಿಕೆ ಮೇಲೆ ಲವಲವಿಕೆಯಿಂದ ಅಡ್ಡಾಡುತ್ತಿದ್ದರು.

ADVERTISEMENT

‘ಸಿನಿಮಾದಲ್ಲಿ ಕೇವಲ ಪ್ರೀತಿಯಷ್ಟೇ ಇದ್ದರೆ ಪ್ರೇಕ್ಷಕರು ಇಷ್ಟಪಡುವುದಿಲ್ಲ. ಬರೀ ಸಸ್ಪೆನ್ಸ್‌ ಇಟ್ಟುಕೊಂಡೂ ಸಿನಿಮಾ ಯಶಸ್ಸು ಕಾಣುವುದು ಕಷ್ಟ. ಈ ಎರಡೂ ಬೆರೆತಿದ್ದರೆ ಜನರಿಗೆ ಸಿನಿಮಾ ಇಷ್ಟವಾಗುತ್ತದೆ. ನಮ್ಮ ಸಿನಿಮಾದಲ್ಲಿ ಪ್ರೀತಿ ಮತ್ತು ಸಸ್ಪೆನ್ಸ್‌ ಹದವಾಗಿ ಬೆರೆತಿದೆ’ ಎಂದರು ಅದಿತಿ. ನಿರ್ದೇಶಕ ಶಿವತೇಜಸ್‌ ಚಿತ್ರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಉತ್ಸಾಹದಲ್ಲಿದ್ದರು.


ಶಿವತೇಜಸ್‌

‘ಈ ಸಿನಿಮಾಕ್ಕೆ ಆರಂಭದಿಂದಲೂ ಉತ್ತಮ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಚಿತ್ರ ಮೂಡಿಬಂದಿದೆ. ಹೊಸ ತಂಡದ ಪರಿಶ್ರಮಕ್ಕೆ ಪ್ರೇಕ್ಷಕರು ಒಪ್ಪಿಗೆಯ ಮುದ್ರೆ ಹಾಕಲಿದ್ದಾರೆ’ ಎಂಬ ನಂಬಿಕೆ ವ್ಯಕ್ತಪಡಿಸಿದರು.

‘ನಮ್ದೂಕೆ ಹಿಂಗಿದೆ...’ ಹಾಡಿನ ಯಶಸ್ಸಿನ ಗುಂಗಿನಲ್ಲಿದ್ದರು ಸಂಗೀತ ನಿರ್ದೇಶಕ ಎಮಿಲ್‌.

ಡಾ.ಕೆ. ರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಲ್ಕು ಹಾಡುಗಳು ಸಿನಿಮಾದಲ್ಲಿವೆ. ಈಗಾಗಲೇ, ಚಿತ್ರೀಕರಣ ಪೂರ್ಣಗೊಂಡಿದೆ. ಜೂನ್‌ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಜನರ ಮುಂದೆ ಬರಲು ಚಿತ್ರತಂಡ ಸಿದ್ಧತೆಯಲ್ಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.