ಧಾರವಾಡದ ಕಸೂತಿ ಸೀರೆಗಳು ಬೇಕೆಂದರೆ ಅದಕ್ಕೆ ಉತ್ತರ ಕರ್ನಾಟಕಕ್ಕೇ ಹೋಗಬೇಕಾಗಿತ್ತು. ಇಲ್ಲವೇ ಖಾದಿ ಕರಕುಶಲ ಮೇಳಕ್ಕಾಗಿ ಕಾಯಬೇಕಿತ್ತು. ಇದನ್ನು ಗಮನಿಸಿಯೇ ಧಾರವಾಡದ ಜಾಹ್ನವಿ ಕುಲಕರ್ಣಿ ತಮ್ಮೂರಿನ ಉತ್ಪಾದನೆಗಳಿಗೆ ಮಾರುಕಟ್ಟೆ ಒದಗಿಸಬೇಕು ಎಂದುಕೊಂಡರು. ಬೆಂಗಳೂರಿನಲ್ಲಿ ‘ಕಲೆ ನೆಲೆ’ ಆರಂಭಿಸಿಯೇ ಬಿಟ್ಟರು.
ಇಳಕಲ್, ಗುಳೇದಗುಡ್ಡ, ಧಾರವಾಡದ ಕಸೂತಿ ಇವುಗಳೆಲ್ಲ ಸೀರೆ ಮತ್ತು ಬ್ಲೌಸ್ಪೀಸ್ಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಜಾಹ್ನವಿ ಅದಕ್ಕೆ ಆಧುನಿಕ ಸ್ಪರ್ಶ ನೀಡಲಾರಂಭಿಸಿದರು. ದುಪ್ಪಟ್ಟಾ, ಖಣದಿಂದಲೇ ತೋರಣ, ಆಧುನಿಕ ಆಭರಣಗಳನ್ನೂ ವಿನ್ಯಾಸಗೊಳಿಸಿದರು. ಪ್ರಯೋಗ ಆರಂಭಿಸಿದ ಕೂಡಲೇ ಹೊಸ ಹೊಸ ಐಡಿಯಾಗಳು. ಕುಷನ್ ಕವರ್, ರನ್ನರ್, ತಲೆದಿಂಬು, ತೋರಣಗಳು, ಕೌದಿ, ಟೇಬಲ್ ರನ್ನರ್, ಹ್ಯಾಂಗಿಂಗ್, ದುಪ್ಪಟ ಟೇಬಲ್ ಮ್ಯಾಟ್, ಬ್ಯಾಗ್ ತಯಾರಿಸುತ್ತಾರೆ. ಜೊತೆಗೆ ಉಳಿದ ತುಂಡು ಬಟ್ಟೆಗಳಲ್ಲಿ ವ್ಯರ್ಥ ಮಾಡದೆ ಅದರಲ್ಲಿ ವಿವಿಧ ರೀತಿಯ ಪೌಚ್ಗಳನ್ನು ತಯಾರಿಸಿದರು.
ಉತ್ತರ ಕರ್ನಾಟಕದ ಮಣ್ಣಿನ ಘಮವನ್ನು ಬಯಸುವವರಿಗೆ ತೋರಣದಿಂದ ಬ್ಯಾಗಿನಲ್ಲಿಡಲು ಪೌಚ್ವರೆಗೂ ಕಣದಲ್ಲಿಯೇ ಸಿಕ್ಕಿದ್ದು ಅನುಕೂಲವಾಯಿತು. ಮಾರುಕಟ್ಟೆ ತಾನೇ ತಾನಾಗಿ ವಿಸ್ತರಿಸಲಾರಂಭಿಸಿತು. ಇಳಕಲ್, ಗುಳೇದಗುಡ್ಡ, ಧಾರವಾಡದ ಕುಶಲಕರ್ಮಿಗಳಿಗೆ ಕೆಲಸ ಒದಗಿಸಿದರು.
ಕಾರ್ಪೊರೇಟ್ ಜಗತ್ತು, ಕಲಾ ಜಗತ್ತು, ಸಂಗೀತ ಮತ್ತು ನೃತ್ಯ ಕಲಾವಿದರು ಉಡುಗೊರೆಗಾಗಿ, ಉಡುಗೆಗಾಗಿ ಇವುಗಳನ್ನು ಹೆಚ್ಚಾಗಿ ಖರೀದಿಸಲು ಮುಂದಾದರು. ಸದ್ಯಕ್ಕೆ ಇದರಿಂದ ಹಲವರಿಗೆ ಉದ್ಯೋಗ ಸಿಕ್ಕಿದೆ ಎನ್ನುತ್ತಾರೆ ಜಾಹ್ನವಿ.
ಇವುಗಳಿಗೆ ಲಂಡನ್, ಸಿಂಗಪುರ ಮತ್ತು ಅಮೆರಿಕದಲ್ಲೂ ಬೇಡಿಕೆ ಇದ್ದು ಇವುಗಳನ್ನು ಪೂರೈಕೆ ಮಾಡಲಾಗುತ್ತದೆ. ಜೊತೆಗೆ ಪಶ್ಚಿಮ ಬಂಗಾಳ, ದೆಹಲಿ, ಗೋವಾ, ಆಂಧ್ರಪ್ರದೇಶ, ಪುಣೆ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧೆಡೆ ಈ ಕಸೂತಿ ಕಲೆಯ ಬೇಡಿಕೆ ಇದ್ದು ಎಲ್ಲಾ ಸ್ಥಳಗಳಿಗೂ ಪೂರೈಸುತ್ತಿದ್ದಾರೆ. ಇವು ಕನಿಷ್ಠ ₹ 200 ರೂಗಳಿಂದ ಗರಿಷ್ಠ ₹ 10,000 ರೂಗಳವರೆಗೆ ಮಾರಾಟವಾಗುತ್ತಿವೆ.
ಹೆಚ್ಚಿನ ಮಾಹಿತಿಗಾಗಿ: www.facebook.com/kalenele
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.