ನಾಟ್ಯನಿಕೇತನ ಸಂಸ್ಥೆಯ 35ನೇ ವಾರ್ಷಿಕೋತ್ಸವ ಪ್ರಯುಕ್ತ ಎ.ಡಿ.ಎ. ರಂಗಮಂದಿರದಲ್ಲಿ ಆಯೋಜಿಸಿದ್ದ `ನಾಟ್ಯಸೌರಭ~ ಭರತನಾಟ್ಯ ಕಾರ್ಯಕ್ರಮ ಗಂಧರ್ವ ಲೋಕವನ್ನೇ ಸೃಷ್ಟಿಸಿತು.
ಸಂಸ್ಥೆಯ 31 ಕಿರಿಯ ವಿದ್ಯಾರ್ಥಿಗಳು ಐದು ತಂಡಗಳನ್ನು ಮಾಡಿಕೊಂಡು ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ವಿದ್ಯಾರ್ಥಿಗಳಾದ ಶ್ರುತಿ ಎನ್.ಮೂರ್ತಿ, ವೈ.ಜಿ. ಶ್ರೀಲತಾ, ಎಂ.ಡಿ. ವನಿತಾ, ಎಂ.ಬಿ. ಐಶ್ವರ್ಯಾ, ವಿ. ಲಾವಣ್ಯ ಗುರುಗಳಾಗಿ ತರಬೇತಿ ನೀಡಿದ್ದರು. ಇದರಿಂದಾಗಿ ಹಿರಿಯ ವಿದ್ಯಾರ್ಥಿಗಳಿಗೆ ನೃತ್ಯಕ್ಕೆ ನಟುವಾಂಗ ಮಾಡಿದ ಅನುಭವವಾಯಿತು.
ನಾಟ್ಯನಿಕೇತನದ ವಿದ್ಯಾರ್ಥಿಗಳ ನೃತ್ಯಾಭಿನಯ, ಭಾವತನ್ಮಯತೆ, ತಂಡದಲ್ಲಿನ ನೃತ್ಯ ಸಹಕಾರ ಅನುಭವಿ ಕಲಾವಿದರಿಗೂ ಕಡಿಮೆಯಿಲ್ಲದಂತೆ ಪ್ರಸ್ತುತಪಡಿಸಿದಂತಿತ್ತು.
ದೊಡ್ಡ ವೇದಿಕೆಯಲ್ಲಿ ತಮ್ಮ ಮಕ್ಕಳ ಪ್ರದರ್ಶನ ಕಣ್ತುಂಬಿಕೊಳ್ಳಲು ಬಂದಿದ್ದ ಪೋಷಕರು ಮನೋಜ್ಞ ಅಭಿನಯ ಕಂಡು ಮಂತ್ರಮುಗ್ಧರಾದರು.
`ಪಿಳ್ಳಂಗೋವಿಯ ಕೃಷ್ಣ~ ಹಾಡಿಗೆ ಸಹನಾ ಮತ್ತು ತಂಡ ನೃತ್ಯ ಮಾಡಿದರು. ಷಣ್ಮುಖಪ್ರಿಯ ರಾಗ ಹಾಡಿದ ವಿದುಷಿ ಭಾರತಿ ವೇಣುಗೋಪಾಲನ್, ಶ್ರೀಲತಾ ಅವರ ನಟುವಾಂಗಕ್ಕೆ ಅಮೋಘವಾಗಿ ನರ್ತಿಸಿದ ಪುಷ್ಪಾ ಮಹದೇವ್, ದೀಕ್ಷಾ, ಮೇಧಾ ಪ್ರಿಯಾಂಕ, ರಿತಿಕಾ ಮತ್ತು ರೂಪಾ ಪ್ರೇಕ್ಷಕರ ಮನಗೆದ್ದರು.
ಗುರು ರೇವತಿ ನರಸಿಂಹನ್ ಮಾರ್ಗದರ್ಶನದಲ್ಲಿ ನೃತ್ಯ ಕಾರ್ಯಕ್ರಮ ಸಂಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.