ಯಾಕೋ ಗೊತ್ತಿಲ್ಲ. ಅಲ್ಲಿ ಸೇರಿದ್ದವರ ಮನಸ್ಸಿನಲ್ಲೆಲ್ಲಾ ಅವ್ಯಕ್ತ ತಳಮಳ. ಯಾರಿಗೂ ಹೇಳಿಕೊಳ್ಳಲಾಗದ ತುಡಿತ. ಒಂದೇ ಶಾಲೆಯಲ್ಲಿ ಕಲಿಯುವಾಗ ಸ್ನೇಹದ ಹಸ್ತ ಚಾಚಿ ಮನಸ್ಸಿಗೆ ಹತ್ತಿರವಾದ ಸ್ನೇಹಿತರೆಲ್ಲರನ್ನೂ ಒಂದೇ ಕ್ಷಣದಲ್ಲಿ ತುಂಬಿಕೊಳ್ಳುವ ಧಾವಂತ...
ಇಂತಹ ಕಾತರದ ಕ್ಷಣಗಳಿಗೆ ಸಾಕ್ಷಿಯಾಗಿದ್ದು 2005ರಲ್ಲಿ ನ್ಯಾಷನಲ್ ಹೈಸ್ಕೂಲ್ನಲ್ಲಿ ಕಲಿತ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭ. ಕನ್ನಡ ಮಾಧ್ಯಮದಲ್ಲಿ ಓದಿದ `ಎ~ ಸೆಕ್ಷನ್ ವಿದ್ಯಾರ್ಥಿಗಳೆಲ್ಲರೂ 7 ವರ್ಷದ ನಂತರ ಒಂಡೆಡೆ ಸೇರಿದ್ದರಿಂದಲೋ ಏನೋ ಅಲ್ಲಿ ಸಂತಸದ ಅಣೆಕಟ್ಟೆ ಒಡೆದಿತ್ತು.
`ಏಯ್, ಯುವರಾಜ್ ನೋಡೊ ಅಲ್ಲಿ; ಧನು ಆವಾಗ ಎಷ್ಟು ಸಣ್ಣಗಿದ್ದ, ಈಗ ಬೋಂಡಾ ತರ ಊದಿಕೊಂಡು ಬಿಟ್ಟಿದ್ದಾನೆ. ಆ ಹರಿಣಿ ನೋಡು ಥೇಟ್ ಜಿಂಕೆ ತರಾನೇ ಆಗಿಬಿಟ್ಟಿದ್ದಾಳೆ ಅಲ್ವಾ...~ ಹೀಗೆ ಬಹಳ ದಿನಗಳ ನಂತರ ನೋಡಿದ ಗೆಳೆಯ ಗೆಳತಿಯರನ್ನು ಕಂಡು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.
ಮೂರು ವರ್ಷ ಒಟ್ಟಾಗಿ ಕಲಿತು, ಕುಣಿದು, ಭಾವನೆಗಳನ್ನು ಪರಸ್ಪರ ಹಂಚಿಕೊಂಡು ವರ್ಷದ ಕೊನೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ ದೂರಾಗುವ ಸ್ನೇಹಿತರನ್ನು ನೆನೆದು ಬಿಗಿದಪ್ಪಿ ಕಂಬನಿ ಸುರಿಸಿದ ನೆನೆಪುಗಳೆಲ್ಲವೂ ಇಲ್ಲಿ ವಿನಿಮಯ ಗೊಂಡವು. ಮನಸ್ಸುಗಳು ಆರ್ದ್ರಗೊಂಡವು. ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ಮಾತು ಮುಗಿಯುವವರೆಗೂ ಮಾತನಾಡಿದರು. ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.