ADVERTISEMENT

ಪೂಜಾ ಬಗಲಲ್ಲಿ ಗೆಲುವೂ- ವಿವಾದವೂ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST
ಪೂಜಾ ಬಗಲಲ್ಲಿ ಗೆಲುವೂ- ವಿವಾದವೂ
ಪೂಜಾ ಬಗಲಲ್ಲಿ ಗೆಲುವೂ- ವಿವಾದವೂ   

`ನೀವು ಪ್ರಚಾರಕ್ಕೆ ಬರುತ್ತಿಲ್ಲ ಎಂಬ ದೂರು ಬಂದಿದೆ ಎಂದು ನಿರ್ಮಾಪಕರ ಸಂಘದಿಂದ ಕರೆ ಬಂದಾಗ ಆಘಾತವಾಯಿತು. ನಟಿಯಾಗಿ ನನ್ನ ಚಿತ್ರಕ್ಕೆ ಎಂದಿಗೂ ಮೋಸ ಮಾಡಿಲ್ಲ. ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ಮಾಡಿದ್ದೇನೆ. ಈ ಘಟನೆ ನನಗೆ ತುಂಬಾ ನೋವುಂಟುಮಾಡಿದೆ~- ನಟಿ ಪೂಜಾ ಗಾಂಧಿ ಬೇಸರದಿಂದ ಹೇಳಿದರು.

`ದೂರು ನೀಡಿಲ್ಲ. ನಿರ್ಮಾಪಕ ಮುನಿರತ್ನ ಅವರ ಬಳಿ ಪೂಜಾ ಗಾಂಧಿ ಅವರಿಗೆ ಒಂದು ಮಾತು ಹೇಳಿ ಎಂದು ಕೇಳಿದ್ದಷ್ಟೇ. ಇದು ತಪ್ಪು ಗ್ರಹಿಕೆಯಿಂದ ಆದ ಲೋಪವಷ್ಟೇ~- ನಿರ್ಮಾಪಕ ಮೇಜರ್ ಶ್ರೀನಿವಾಸ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.
ಇಬ್ಬರ ಮಾತುಗಳಲ್ಲೂ ವೈರುಧ್ಯವಿತ್ತು. ಅದು ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದ ವಿವಾದ.

`ಜೈಹಿಂದ್~ ಚಿತ್ರದ ಪ್ರಚಾರಕ್ಕೆ ಪೂಜಾಗಾಂಧಿ ಬಂದಿಲ್ಲ ಎಂದು ನಿರ್ಮಾಪಕ ಮೇಜರ್ ಶ್ರೀನಿವಾಸ್ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನೆತ್ತಿದಾಗ ಪೂಜಾಗಾಂಧಿ ಮತ್ತು ಶ್ರೀನಿವಾಸ ಪೂಜಾರಿ ಇಬ್ಬರೂ ನೀಡಿದ ಹೇಳಿಕೆಗಳು ತದ್ವಿರುದ್ಧವಾಗಿದ್ದವು.

ದೂರೇ ನೀಡಿಲ್ಲ ಎನ್ನುವುದು ನಿರ್ಮಾಪಕರ ವಾದ. ದೂರು ನೀಡಲಾಗಿದೆ ಎಂಬುದು ನನಗೆ ತಿಳಿದ ವಿಚಾರ ಎನ್ನುವುದು ಪೂಜಾ ಗಾಂಧಿ ಪ್ರತಿವಾದ. ಇದು ವೇದಿಕೆಯ್ಲ್ಲಲಿ ದೊಡ್ಡದಾಗುವುದು ಬೇಡ ಎಂದು ತಣ್ಣಗಾಗಿಸುವ ಪ್ರಯತ್ನವನ್ನು ಇಬ್ಬರೂ ಮಾಡಿದರು.

`ಪ್ರಚಾರಕ್ಕೆ ಪಾಲ್ಗೊಳ್ಳುವಂತೆ ಪೂಜಾಗಾಂಧಿ ಅವರಿಗೆ ಮೊಬೈಲ್ ಫೋನ್‌ನಲ್ಲಿ ಮೆಸೇಜ್ ಕಳುಹಿಸಲಾಗಿತ್ತು. ಆದರೆ ಅವರಿಗೆ ಮೆಸೇಜ್ ತಲುಪಿಲ್ಲ ಎನ್ನುವುದು ತಡವಾಗಿ ತಿಳಿಯಿತು. ಅವರಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನಿರ್ಮಾಪಕ ಮುನಿರತ್ನ ಅವರ ಬಳಿ ಹೇಳಲಾಯಿತು. ದೂರನ್ನೇನೂ ನೀಡಿಲ್ಲ.
 
ಚಿಕ್ಕ ಗೊಂದಲದಿಂದ ಈ ವಿವಾದ ಸೃಷ್ಟಿಯಾಗಿದೆ ಹೊರತು ಬೇರೇನಿಲ್ಲ~ ಎಂದು ಸಮಜಾಯಿಷಿ ನೀಡಿದರು ಶ್ರೀನಿವಾಸ್.`ನಾನು ಕೇರಳದಲ್ಲಿ ಮಲಯಾಳಂ ಚಿತ್ರವೊಂದರ ಚಿತ್ರೀಕರಣದಲ್ಲಿದ್ದೆ. ನನ್ನ ಫೋನ್ ತಂದೆಯ ಬಳಿ ಇತ್ತು. ಚಿತ್ರತಂಡದಿಂದ ಯಾವ ಕರೆಯಾಗಲೀ ಅಥವಾ ಮೆಸೇಜ್ ಆಗಲೀ ಬಂದಿಲ್ಲ. ನಿರ್ಮಾಪಕರ ಸಂಘದಿಂದ ಕರೆ ಬಂದಾಗಲೇ ಈ ಬಗ್ಗೆ ಗೊತ್ತಾಗಿದ್ದು.
 
ನನ್ನ ಎಲ್ಲಾ ಚಿತ್ರಗಳ ಪ್ರಚಾರದಲ್ಲೂ ಇದುವರೆಗೆ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ಹಾಗಿರುವಾಗ ಈ ರೀತಿ ಆರೋಪ ಬಂದಿದ್ದು ಬೇಸರ ತಂದಿದೆ ಎಂದ ಪೂಜಾಗಾಂಧಿ, ಈಗ ಇದೆಲ್ಲಾ ಬಗೆಹರಿದಿದೆ ಎಂದು ಚರ್ಚೆಗೆ ತಿಲಾಂಜಲಿ ಇಟ್ಟರು.ಆದರೂ ಇಬ್ಬರ ಮಾತಿನಲ್ಲೂ ಪರಸ್ಪರ ಅಸಮಾಧಾನ ಸಣ್ಣನೆ ವ್ಯಕ್ತವಾಗಿದ್ದು ಸ್ಪಷ್ಟವಾಗಿತ್ತು.

ಅಂದಹಾಗೆ, ಪೂಜಾಗಾಂಧಿ `ದಂಡುಪಾಳ್ಯ~ದ ಯಶಸ್ಸಿನ ಗುಂಗಲ್ಲಿ ತೇಲಾಡುತ್ತಿದ್ದಾರೆ. ಮಹಿಳೆಯರು, ಕುಟುಂಬವಿಡೀ ಒಟ್ಟಿಗೆ ಕೂತು ನೋಡಲು ಹಿಂಜರಿಯುವಂತಹ ಸಿನಿಮಾವನ್ನು ಪೂಜಾ ಗಾಂಧಿ ಈಗಾಗಲೇ ಏಳು ಬಾರಿ ನೋಡಿದ್ದಾರಂತೆ. ಗೆಲುವನ್ನು ಮತ್ತೆ ಮತ್ತೆ ಆಸ್ವಾದಿಸುತ್ತಾ ಅವರು ಸಂಭ್ರಮಿಸುತ್ತಿದ್ದಾರೆ. `ದಂಡುಪಾಳ್ಯ~ದ ಗೆಲುವಿನ ಬೆನ್ನಲ್ಲಿ ಅದರ ಎರಡನೇ ಭಾಗದಲ್ಲೂ ನಟಿಸಲು ಅವರು ಹುಮ್ಮಸ್ಸಿನಿಂದ ಸಿದ್ಧರಾಗುತ್ತಿದ್ದಾರೆ.

ಸಾಲು ಸಾಲು ಸೋಲಿನ ಬಳಿಕ ಭರ್ಜರಿ ಗೆಲುವು ದಕ್ಕಿದ ನಂತರ ಪೂಜಾ ಬದಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. `ಹೂವಿ~ ಚಿತ್ರದಿಂದ ಅವರು ಹೊರಬಂದಿದ್ದಾರೆ ಎಂಬ ಸುದ್ದಿಯೂ ಇತ್ತು. ಅದೆಲ್ಲಾ ಸುಳ್ಳು ಎಂದು ಪೂಜಾ ಹೇಳಿದ್ದಾರೆ. ಗೆಲುವು ಬೆನ್ನೇರುತ್ತಿದ್ದಂತೆ `ಮಳೆ ಹುಡುಗಿ~ ವಿವಾದದಲ್ಲಿ ನೆನೆಯುತ್ತಿರುವುದು ತುಸು ಜಾಸ್ತಿ ಆಗಿದೆ ಎನ್ನುವುದು ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತು.

 ಚಿತ್ರಗಳು- ಕೆ.ಎನ್.ನಾಗೇಶ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT