ಒಂದು ದಿನ ನಾನೊಬ್ಬನೇ ಗಾಂಧಿಬಜಾರ್ನಿಂದ ಮೆಜೆಸ್ಟಿಕ್ಗೆ ಪ್ರಯಾಣಿಸಬೇಕಾಗಿತ್ತು. ಆಗ ನಾನು ಹತ್ತಿದ ಆಟೊ ಚಾಲಕ ಪ್ರಯಾಣದುದ್ದಕ್ಕೂ ಚೆನ್ನಾಗಿ ಮಾತನಾಡಿಸುತ್ತಿದ್ದ.
`ಸಾರ್ ನಾನು ಮುಂಚೆ ಒಂದು ಫೋಟೊ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಕಷ್ಟ ಪಟ್ಟು ಸಂಪಾದಿಸಿ ನನ್ನ ಮಗಳ ಮದುವೆ ಮಾಡಿದೆ. ಮದುವೆ ಮುಂತಾದ ದೊಡ್ಡ ಸಮಾರಂಭಗಳಲ್ಲಿ ಫೋಟೊ ತೆಗೆಯುತ್ತಿದ್ದ ನನಗೆ ಪಕ್ಷಿಗಳ ಫೋಟೊ ತೆಗೆಯುವ ಹುಚ್ಚು. ನಾನು ತೆಗೆದ ಕೆಲವು ಅಪರೂಪದ ಚಿತ್ರಗಳನ್ನು ನನ್ನ ಆಟೊವಿನ ಒಳ ಬದಿಯಲ್ಲಿ ಅಂಟಿಸಿದ್ದೇನೆ ನೋಡಿ' ಎಂದ.
ಅಲ್ಲಿಯವರೆಗೂ ಅವನ್ನು ಎಲ್ಲಿಂದಾದರೂ ಕತ್ತರಿಸಿ ಅಂಟಿಸಿಕೊಂಡಿರಬೇಕು ಎಂದೇ ಭಾವಿಸಿದ್ದೆ. ಸುಮಾರು ಐದಾರು ಅತ್ಯಂತ ಆಕರ್ಷಕವಾದ ಫೋಟೊಗಳಿದ್ದವು. ನಾನು ಇಳಿಯಬೇಕಾದ ಜಾಗದಲ್ಲಿ ಇಳಿದು ಆಟೊ ಚಾಲಕನಿಗೆ ದುಡ್ಡು ಕೊಟ್ಟು ಹೀಗೆಂದೆ - `ಇಂದು ನಾನು ಸ್ವಾವಲಂಬಿ ಆಟೊ ಚಾಲಕನನ್ನು ಮಾತ್ರವಲ್ಲ, ಸದಭಿರುಚಿಯ ಅಪರೂಪದ`ಕಲಾವಿದನನ್ನೂ ಕಂಡೆ'. ಆಟೋ ಚಾಲಕನ ಮೊಗದಲ್ಲೊಂದು ಸಾರ್ಥಕ್ಯದ ನಗು ಮೂಡಿತ್ತು. ಇದಕ್ಕೂ ಮೊದಲು ನಾವು ಕಾರಿನಲ್ಲಿ ಹೋಗುತ್ತಿದ್ದಾಗ ಬಾಯಿಗೆ ಬಂದಂತೆ ಬೈದು ಕಿರಿಕಿರಿ ಉಂಟುಮಾಡಿದ್ದ ಚಾಲಕನ ಕೆಟ್ಟ ವರ್ತನೆ ಕೂಡ ಮರೆಯುವಂತಿತ್ತು ಈತನ ವರ್ತನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.