ಸಂಜೆಯಾಗುತ್ತಿದ್ದಂತೆ ಸಣ್ಣಗೆ ಸೋಕುವ ಮಳೆ. ತಂಗಾಳಿ, 22-23 ಡಿಗ್ರಿ ದಾಟದ ಉಷ್ಣಾಂಶ. ಗಿರಿಧಾಮದ ವಾತಾವರಣ. ಬೇಸಿಗೆಯಲ್ಲೂ ಸ್ವೆಟರ್ ಬೇಕು ಅನಿಸುವಂಥ ಹಂಬಲ. 30-40 ವರ್ಷಗಳ ಹಿಂದಿನ ಬೆಂಗಳೂರು ಅದು.
ಫೆಬ್ರವರಿಯಾಗುತ್ತಿದ್ದಂತೆ ಮುಗಿಯುವ ಚಳಿಗಾಲ. ಬೇಸಿಗೆಯಲ್ಲಿ 35 ಮುಟ್ಟುವ ಉಷ್ಣಾಂಶ. ರಾತ್ರಿ ಅಸಾಧ್ಯ ಸೆಕೆ. ಹಗಲಲ್ಲಿ ಬಯಲುಸೀಮೆ ಮೀರಿಸುವ ಬಿಸಿಲು, ಧೂಳು. ದಶಕದಿಂದ ಈಚೆಗೆ ಕಾಣುತ್ತಿರುವ ಬೆಂಗಳೂರಿನ ಚಿತ್ರಣ ಇದು.
ಆದರೆ, ಈ ವರ್ಷ ಎಲ್ಲ ಬದಲಾಗಿದೆ. ಕಳೆದ ಕೆಲ ದಿನಗಳಿಂದ ಹವಾಮಾನ ತಂಪಾಗಿದೆ. ವೈಶಾಖ ಹೊಸಿಲಲ್ಲಿ ಬಂದು ನಿಂತಿದ್ದರೂ ದಿಢೀರ್ ಎಂದು ಮಧ್ಯಾಹ್ನ, ಸಂಜೆಯ ಹೊತ್ತಿಗೆ ಮಳೆಯಾಗುತ್ತಿದೆ. ಚಳಿಗಾಲ ವಿಸ್ತರಣೆ ಪಡೆದಿದೆಯೋ ಎಂಬಂತೆ ನಸುಕಿನಲ್ಲಿ ತಂಗಾಳಿ.. ಚಳಿ.. ಚಳಿ..
ಬಾಲಭವನದಲ್ಲಿ ಚಿಲಿ ಪಿಲಿಗುಡುತ್ತ ಆಟವಾಡುವ ಪುಟಾಣಿಗಳು.. ವಂಡರ್ಲಾದಲ್ಲಿ ಮಜಾ ಮಾಡಲು ತೆರಳಿದ್ದ ಕುಟುಂಬ ಸದಸ್ಯರು, ಕಮರ್ಷಿಯಲ್, ಎಂ ಜಿ ರಸ್ತೆಯಲ್ಲಿ ವಾಕ್ ಮಾಡುವ ಯುವ ಜೋಡಿಗಳು... ಮಡುವುಗಟ್ಟಿ ಸುರಿಯುವ ಮಳೆಯಿಂದ ಎಲ್ಲರ ಉತ್ಸಾಹ ಭಂಗ.
ಮಕ್ಕಳ ಬೇಸಿಗೆ ರಜೆಯ ಗಮ್ಮತ್ತು ಹಾಳು ಮಾಡಲೆಂದೇ ಮಳೆಗೆ ಆರ್ಡರ್ ಆಗಿದೆಯಾ...?
ಬೇಸಿಗೆ ಋತು ಶುರುವಾಯಿತೆಂದರೆ ರಸ್ತೆ ಬದಿಯ ವ್ಯಾಪಾರಿಗಳಿಗೆ ವರ್ಷದ ಖರ್ಚಿಗೆ ಹಣ ಕೂಡಿಡುವ ಸಂಭ್ರಮ. ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳ ಜೋರು, ಜೋರು ವ್ಯಾಪಾರ. ನಂದಿನಿ ಪಾರ್ಲರ್ಗಳಲ್ಲಿ ಮಜ್ಜಿಗೆ, ಮಿಲ್ಕ್ಶೇಕ್ಗಳ ಮಾರಾಟ. ಐಸ್ಕ್ರೀಂ, ಜ್ಯೂಸ್ ಮಳಿಗೆಗಳಲ್ಲಿ ಕ್ಯೂ.
ಆದರೆ, ಈ ಬಾರಿಯ ಬಿಸಿಲು, ಮಳೆ ಚೆಲ್ಲಾಟ ಪುಟ್ಟ ವ್ಯಾಪಾರಿಗಳಿಗೆಲ್ಲ ಹೊಡೆತ ನೀಡಿದೆ.
‘ಬಿಸಿನೆಸ್ ಒಂದು ದಿನ ಇದ್ದಂತೆ ಇನ್ನೊಂದು ದಿನ ಇರೋದಿಲ್ಲ. ಮಳೆ ಬಂದರೆ ಹಣ್ಣು ತಿನ್ನಲು ಬರುವವರು ಯಾರು ಎಂದು ಅಳಲು ತೋಡಿಕೊಳ್ಳುತ್ತಾರೆ’ ಎಂ.ಜಿ. ರಸ್ತೆಯಲ್ಲಿ ಕತ್ತರಿಸಿದ ಹಣ್ಣು ಮಾರಾಟ ಮಾಡುವ ಜನಾರ್ದನ. ಜ್ಯೂಸ್ ಅಂಗಡಿಯವರದ್ದೂ ಇದೇ ಗೋಳು.
ಈ ಮಧ್ಯೆ ಶೀತಗಾಲದ ರೋಗಗಳು ಮತ್ತೆ ಜೀವ ಪಡೆದಿವೆ. ಬೆಳಿಗ್ಗೆ ಧೂಳು, ಬಿಸಿಲು... ಸಂಜೆಯಾಗುತ್ತಿದ್ದಂತೆ ಬೀಳುವ ದಿಢೀರ್ ಮಳೆಗೆ ಗಂಟಲು ಕೆರೆತ, ಮೂಗು ಬ್ಲಾಕ್... ದಮ್ಮು, ಉಬ್ಬಸ.
ನೈರುತ್ಯ ಮತ್ತು ಈಶಾನ್ಯ ಮುಂಗಾರು ಮಾರುತಗಳು ಬೆಂಗಳೂರಿಗೆ ಸಾಮಾನ್ಯವಾಗಿ ಮಳೆ ತರುತ್ತವೆ. ನೈರುತ್ಯ ಮುಂಗಾರು ಕಾಲಿಡುವುದೇ ಜೂನ್ನಲ್ಲಿ. ಆದರೆ, ಇದು ಈಶಾನ್ಯ ಮುಂಗಾರಿನ ಎಫೆಕ್ಟ್ ಅನ್ನುತ್ತಾರೆ ಹವಾಮಾನ ತಜ್ಞರು.
ಮಳೆಗಾಲಕ್ಕೂ ಮುನ್ನ ಟ್ರೇಲರ್ ತೋರಿಸಿದಂತೆ ಬೀಳುತ್ತಿರುವ ಈ ಮಳೆ ಬಿಬಿಎಂಪಿ ಕಾರ್ಯದಕ್ಷತೆಗೂ ಕನ್ನಡಿ ಹಿಡಿದಿದೆ. ಹತ್ತು ದಿನಗಳ ಹಿಂದೆ ಭೋರ್ಗರೆದು ಮಳೆ ಬಿದ್ದಾಗ ಹಲವು ಬಡಾವಣೆಗಳಲ್ಲಿ ಮರ ಉರುಳಿದವು. ಚರಂಡಿ ಕಟ್ಟಿಕೊಂಡು ಮಳೆನೀರು ರಸ್ತೆಯ ಮೇಲೆ ಮಡುಗಟ್ಟಿತು. ಮೈಲುಗಟ್ಟಲೇ ಟ್ರಾಫಿಕ್ ಜಾಮ್ ಆಗಿ ನಿಂತಿತು. ಭಾನುವಾರ ಸಂಜೆ ಬಿದ್ದ ಮಳೆ, ಬಡ ವ್ಯಾಪಾರಿಯೊಬ್ಬನ ಬಲಿ ತೆಗೆದುಕೊಂಡಿತು.
ಪ್ರತಿ ಮಳೆಗಾಲದಲ್ಲೂ ಗೋಡೆ ಕುಸಿದು, ಮರ ಬಿದ್ದು ಒಂದಿಬ್ಬರು ಜೀವ ಕಳೆದುಕೊಳ್ಳುವುದು, ಪ್ರವಾಹದಲ್ಲಿ ಮಕ್ಕಳು ಕೊಚ್ಚಿಹೋಗುವುದು, ಕಾರುಗಳು ಪುಡಿಯಾಗುವುದು ಇತ್ತೀಚೆಗೆ ಸಾಮಾನ್ಯ ವಿದ್ಯಮಾನ.
ಮಳೆಗಾಲಕ್ಕಿಂತ ಮುನ್ನ ಅಡ್ಡಾದಿಡ್ಡಿ ಬೆಳೆದ ಮರಗಳ ರೆಂಬೆ ಕತ್ತರಿಸುವುದು, ಕಟ್ಟಿಕೊಂಡ ಚರಂಡಿ, ರಾಜಕಾಲುವೆ ಸ್ವಚ್ಛಗೊಳಿಸುವತ್ತ ಪಾಲಿಕೆ ಅಧಿಕಾರಿಗಳು ಗಮನ ಹರಿಸದಿದ್ದಲ್ಲಿ ಮುಂಬರುವ ಮಳೆಗಾಲ ಮತ್ತಷ್ಟು ಭೀಕರ ಪರಿಣಾಮ ಮಾಡೀತು..!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.