ಮಂಡ್ಯ ಕನ್ನಡ ಚಿತ್ರರಂಗದವರ ಪಾಲಿಗೆ ಎಂದಿಗೂ ಮುಗಿಯದ ಕತೆಗಳ ಕಣಜ. ಎಷ್ಟೊಂದು ಸಿನಿಮಾಗಳು ಆ ನೆಲ–ಭಾಷೆಯಲ್ಲಿ ರೂಪುಗೊಂಡಿದ್ದರೂ ಗಾಂಧಿನಗರದ ಮಂಡ್ಯ ವ್ಯಾಮೋಹ ಇನ್ನೂ ಕಮ್ಮಿಯಾಗಿಲ್ಲ. ಇದೀಗ ಮಂಡ್ಯದಲ್ಲಿಯೇ ನಡೆಯುವ ಇನ್ನೊಂದು ‘ರಗಡ್’ ಪ್ರೇಮಕಥೆ ತೆರೆಗೆ ಬರಲು ಸಜ್ಜಾಗಿದೆ.
ಸಿನಿಮಾದ ಹೆಸರು ‘ರಘುವೀರ’. ‘ರಗಡ್ ಲವ್ ಸ್ಟೋರಿ’ ಎಂಬ ಅಡಿಶೀರ್ಷಿಕೆಯೂ ಇದೆ. ಇದು ಸತ್ಯಘಟನೆ ಆಧಾರಿತ ಚಿತ್ರ ಎಂಬ ಹೆಗ್ಗಳಿಕೆಯನ್ನು ತೆಗೆದುಕೊಳ್ಳಲಿಕ್ಕಂತೂ ಚಿತ್ರತಂಡ ಮರೆಯುವುದೇ ಇಲ್ಲ.
ಮೊದಲ ಬಾರಿಗೆ ಸೂರ್ಯ ಸತೀಶ್ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳೂ ಇದೀಗ ಲೋಕಾರ್ಪಣೆಗೊಂಡಿವೆ. ತಮಿಳಿನ ನಟ ವಿಶಾಲ್ ಹಾಡುಗಳನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ವಿದೇಶದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಶಿವರಾಜಕುಮಾರ್ ಅಲ್ಲಿಂದಲೇ ವಿಡಿಯೊದ ಮೂಲಕ ಶುಭ ಹಾರೈಸಿದರು.
ಮೂರು ವರ್ಷ ಪ್ರೇಮಪಕ್ಷಿಗಳಾಗಿದ್ದ ಜೋಡಿಯೊಂದು ಕೆಲವರ ಮೂಢನಂಬಿಕೆಗೆ ಬಲಿಯಾಗಿ ದೂರವಾಗುವ ದುರಂತ ಕಥೆ ಈ ಸಿನಿಮಾದಲ್ಲಿದೆ. ಹರ್ಷ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಕೊಡಗಿನ ಹುಡುಗಿ ಧೇನು ಅಚ್ಚಪ್ಪ ನಾಯಕಿಯಷ್ಟೇ ಅಲ್ಲ, ನಿರ್ಮಾಪಕಿಯೂ ಹೌದು.
ಮಂಡ್ಯ, ಮೈಸೂರು, ಮಳವಳ್ಳಿ, ಶ್ರೀರಂಗಪಟ್ಟಣ ಸುತ್ತಮುತ್ತಲಿನ ಪ್ರದೇಶದಲ್ಲಿ 48 ದಿನಗಳ ಕಾಲ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.