‘ಮಾಂತ್ರಿಕ’ ಇದು ದೆವ್ವ ಭೂತಗಳ ಕಥೆ ಅಲ್ಲ, ದೆವ್ವಗಳೆಲ್ಲ ಇಲ್ಲ ಎನ್ನುವ ರೀತಿಯಲ್ಲಿಯೇ ಸಿನಿಮಾದಲ್ಲಿ ತೋರಿಸಿದ್ದೇವೆ’ ಹೀಗೆ ನಿರೀಕ್ಷಣಾ ಜಾಮೀನು ಪಡೆದುಕೊಂಡೇ ಪತ್ರಕರ್ತರ ಜತೆ ಮಾತಿಗೆ ಇಳಿದರು ನಿರ್ದೇಶಕ ವ್ಯಾನ ವರ್ಣ.
ಆದರೆ ಸುದ್ದಿಗೋಷ್ಠಿಯುದ್ದಕ್ಕೂ ಕಲಾವಿದರೆಲ್ಲ ಹಂಚಿಕೊಂಡಿದ್ದು ಚಿತ್ರೀಕರಣದಲ್ಲಿ ತಾವು ಅನುಭವಿಸಿದ್ದೇವೆ ಎನ್ನಲಾದ ಭೂತದ ಕತೆಗಳನ್ನೇ!
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ಸಿನಿಮಾ ಮಾಡುವ ಉದ್ದೇಶದಿಂದಲೇ ತಮ್ಮ ಹೆಸರನ್ನೂ ‘ವ್ಯಾನ ವರ್ಣ’ ಎಂದು ಬದಲಿಸಿಕೊಂಡಿದ್ದಾರೆ.
‘ವ್ಯಾನ ಎಂದರೆ ಗಾಳಿ ಮತ್ತು ವರ್ಣ ಎಂದರೆ ಬಣ್ಣ. ವ್ಯಾನ ವರ್ಣ ಎಂದರೆ ಗಾಳಿಯಲ್ಲಿನ ಬಣ್ಣ ಎಂದು’ ಎಂದು ತಮ್ಮ ಹೆಸರಿನ ಅರ್ಥಗಳನ್ನೂ ಅವರು ಬಿಚ್ಚಿಟ್ಟರು.
ಅವಲಳ್ಳಿ ಸಮೀಪದ ಕಳೆದ ಐದು ವರ್ಷದಿಂದ ಖಾಲಿ ಬಿದ್ದಿರುವ ಹಳೆಯ ಮಾಲ್ನಲ್ಲಿ 40 ದಿನಗಳಲ್ಲಿ ‘ಮಾಂತ್ರಿಕ’ ಚಿತ್ರೀಕರಿಸಲಾಗಿದೆ. ಈ ಚಿತ್ರೀಕರಣದ ಸಂದರ್ಭದಲ್ಲಿ ಅನೇಕರಿಗೆ ಅತೀಂದ್ರಿಯ ಅನುಭವಗಳಾಗಿವೆಯಂತೆ. ಇಂಥ ಅನುಭವಗಳಿಗೆ ಹೆದರಿ ತಂಡ ಬಿಟ್ಟು ಓಡಿ ಹೋದವರ ಸಂಖ್ಯೆಯೂ ಕಮ್ಮಿಯೇನಲ್ಲ. ಮುಖ್ಯಪಾತ್ರದಲ್ಲಿ ನಟಿಸಿರುವ ಮೈಥಿಲಿ ಅವರಿಗೂ ಇಂಥ ಅನುಭವ ಆಗಿದೆಯಂತೆ.
ವೆಂಕಟೇಶ್ ರಾವ್. ಎಚ್. ಅವರು ಹಣ ಹೂಡಿರುವ ‘ಮಾಂತ್ರಿಕ’ ಸಿನಿಮಾಕ್ಕೆ ಸ್ಟಾಲಿನ್ ಸಂಗೀತ, ಎಂ. ರಮೇಶ್ ಛಾಯಾಗ್ರಹಣ ಇದೆ. ಈಗಾಗಲೇ ತೊಂಬತ್ತರಷ್ಟು ಚಿತ್ರೀಕರಣ ಮುಗಿಸಿರುವ ತಂಡ, ಸದ್ಯದಲ್ಲಿಯೇ ಚಿತ್ರ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.