ADVERTISEMENT

ರಂಜಿಸಿದ ಸಿರಿಕಲಾ ಯಕ್ಷಗಾನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಸಿರಿಕಲಾಮೇಳದವರು ಆಯೋಜಿಸಿದ್ದ ‘ಎರಡನೆಯ ಸಿರಿಕಲಾ ಯಕ್ಷಗಾನ ಸಪ್ತಾಹ’ ಇತ್ತೀಚೆಗೆ ವಿವಿಧ ಬಡಾವಣೆಗಳಲ್ಲಿ ಯಶಸ್ವಿಯಾಗಿ ನಡೆಯಿತು. ಸಪ್ತಾಹದಲ್ಲಿ ದ್ರೌಪದಿ ಪ್ರತಾಪ, ಭೀಷ್ಮವಿಜಯ, ಮಾರುತಿ ಪ್ರತಾಪ, ಶಿವಭಕ್ತ ವೀರಮಣಿ, ರತ್ನಾವತಿ ಕಲ್ಯಾಣ, ದಕ್ಷಯಜ್ಞ ಹಾಗೂ ರಾಮಾಶ್ವಮೇಧ ಪ್ರಸಂಗಗಳು ಪ್ರದರ್ಶನಗೊಂಡವು.

ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕಷ್ಣ ಹೆಗಡೆ, ವೇಣುಗೋಪಾಲ ಅವರ ಸುಸ್ವರ ಗಾನವೈವಿಧ್ಯ, ಮದ್ದಳೆಯಲ್ಲಿ ಎ.ಪಿ.ಪಾಠಕ್, ಪರಮೇಶ್ವರ ಭಂಡಾರಿ, ನಾರಾಯಣ ಹೆಬ್ಬಾರರ ಕೈಚಳಕ, ಶಿವಾನಂದ ಕೋಟ, ಅಮೃತದೇವ ಕಟ್ಟಿನಕೆರೆ, ಶ್ರೀನಿವಾಸ ಪ್ರಭು ಅವರ ಅಬ್ಬರದ ಚಂಡೆ ಪ್ರದರ್ಶನಕ್ಕೆ ರಂಗು ತಂದುಕೊಟ್ಟಿತು.

ಮುಮ್ಮೇಳದಲ್ಲಿ ಗೀತಾಹೆಗಡೆ ಅವರ ಹನುಮಂತ ಮತ್ತು ಶತೃಘ್ನನ ಪಾತ್ರ ಪ್ರೇಕ್ಷಕರು ತಲೆದೂಗುವಂತೆ ಮಾಡಿತು. ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರಶಾಂತವರ್ಧನರ ಭೀಮ, ಪರಶುರಾಮ, ಬಲರಾಮ, ಈಶ್ವರ, ಭದ್ರಸೇನ, ವೀರಭದ್ರ ಹಾಗೂ ರಾಮನ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂತು.

ಕಲಾವಿದ ವಿನಯ ಭಟ್ ಅವರು ಅರ್ಜುನ, ಸಾಲ್ವ, ವೀರಮಣಿ, ದಕ್ಷನ ಪಾತ್ರಗಳನ್ನು ದಕ್ಷತೆಯಿಂದಲೇ ನಿರ್ವಹಿಸಿದರು. ಯಕ್ಷ ಸಹೊದರಿಯರೆಂದೇ ಪ್ರಸಿದ್ಧಿ ಪಡೆದಿರುವ ಅರ್ಪಿತಾ ಹೆಗಡೆ ಮತ್ತು ಕಿರುತೆರೆ ನಟಿ ನಾಗಶ್ರೀ ಗೀಜಗಾರರ ಪಾತ್ರಗಳು ಕಲಾರಸಿಕರನ್ನು ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT