ಹೊಸಕೋಟೆ ತಾಲ್ಲೂಕು ಚಿಂತಾಮಣಿ ರಸ್ತೆಯ ಪಿಲ್ಲಗುಂಪೆ-ಚೊಕ್ಕಹಳ್ಳಿಯಲ್ಲಿರುವ ವೆಂಕಟಾದ್ರಿ ಮಠದಲ್ಲಿ ಇದೇ ಭಾನುವಾರ (ಮಾ.4) ವೆಂಕಟಾದ್ರಿ ಸ್ವಾಮಿಗಳ 77 ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ಜಾತ್ರೆ ನಡೆಯಲಿದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಿಂದಿನ ಭಾನುವಾರ ಆರಾಧನಾ ಮಹೋತ್ಸವ ನಡೆಯಲಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.
ಮಠದ ಆವರಣದಲ್ಲಿ 27 ಅಡಿ ಎತ್ತರದ ತ್ರಿಪದಿನಾಮ, ಶಂಖ ಹಾಗೂ ಚಕ್ರಗಳನ್ನು ನಿರ್ಮಿಸಲಾಗಿದ್ದು, ಇದು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ. 1935ರಲ್ಲಿ ನಿಧನರಾದ ಪವಾಡ ಪುರುಷ ವೆಂಕಟಾದ್ರಿ ಸ್ವಾಮಿಗಳ ಗದ್ದುಗೆಯನ್ನೂ ಇಲ್ಲಿ ನಿರ್ಮಿಸಲಾಗಿದೆ.
ಆವರಣದಲ್ಲಿ ಕಾಗೆ, ಹಲ್ಲಿ, ಆಮೆ ವಿಗ್ರಹಗಳನ್ನು ನಿರ್ಮಿಸಿದ್ದು ಅದನ್ನು ಮುಟ್ಟಿ ಪೂಜಿಸಿದರೆ ದೋಷ ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಈಚೆಗೆ ನವ ಆಂಜನೇಯಸ್ವಾಮಿ ಶಿಲೆ ಪ್ರತಿಷ್ಠಾಪಿಸಲಾಗಿದೆ.
ಪ್ರತಿ ಅಮಾವಾಸ್ಯೆ ಗಾಯತ್ರಿ ಪೂಜೆ ಮಂಗಳವಾರ, ಗುರುವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯುತ್ತವೆ. ಆ ದಿನ ಪೂಜೆ ಸಲ್ಲಿಸಿದರೆ ತಮ್ಮ ಕಷ್ಟ ನಿವಾರಣೆ ಯಾಗುತ್ತದೆಯೆಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ವೆಂಕಟಾದ್ರಿಸ್ವಾಮಿಗಳ ಮಗ ಕುನ್ನಾಚಾರ್ಸ್ವಾಮಿ ಇಲ್ಲಿ ಮಠ ನಿರ್ಮಿಸಿದ್ದು ಅವರ ನಿಧನದ ನಂತರ ಅವರ ಮಗ ಕೆ.ವೆಂಕಟಾಚಾರ್ಸ್ವಾಮಿ ಮಠದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಆರಾಧನಾ ಮಹೋತ್ಸವದ ಅಂಗವಾಗಿ ಮಾ.3 ರಂದು 24 ಗಂಟೆ ರಾಮಕೋಟಿ ಭಜನೆ, ಮಾ.4 ರಂದು ಹರಿಕಥೆ ಹಾಗೂ ಮಾ.5 ರಂದು ರಾತ್ರಿ `ದಾನವೀರಶೂರ ಕರ್ಣ~ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.