ADVERTISEMENT

ಹೃದಯದ ಚಿತ್ತಾರ!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಎಸ್‌ಒಎಸ್ ಸಂಸ್ಥೆಯ ಮಕ್ಕಳು ಈಚೆಗೆ ಬಿಳಿ ಹಾಳೆಯ ಮೇಲೆ ರಂಗುರಂಗಿನ ಚಿತ್ರಗಳನ್ನು ಬಿಡಿಸುವಲ್ಲಿ ನಿರತರಾಗಿದ್ದರು. ತಮ್ಮ ಕಲ್ಪನೆಗಳನ್ನು ಬಣ್ಣಗಳಲ್ಲಿ ಹಿಡಿದಿಡುತ್ತಲೇ ತಮ್ಮ ನೆಚ್ಚಿನ ಊಟ, ಆಭರಣ, ತಾಣ ಮುಂತಾದವುಗಳ ಚಿತ್ರ ಬಿಡಿಸುತ್ತಿದ್ದರು.

ಮುಂಬೈ, ಬೆಂಗಳೂರು, ಪುಣೆ ಹಾಗೂ ದೆಹಲಿಯಲ್ಲಿ ನಾಲ್ಕುನೂರು ಅವಕಾಶ ವಂಚಿತ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಈಡನ್‌ರೆಡ್ ಸಂಸ್ಥೆಯು ಏರ್ಪಡಿಸಿತ್ತು. ಪ್ರತಿ ವಿಭಾಗದಿಂದಲೂ 12 ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಆ ಮಕ್ಕಳಿಗೆ ಒಂದು ವರ್ಷದ ಸ್ಕಾಲರ್‌ಶಿಪ್ ಅನ್ನು ಬಹುಮಾನದ ರೂಪದಲ್ಲಿ ನೀಡಲಾಯಿತು. ಇದಲ್ಲದೆ ಇನ್ನಿತರ ಕೊಡುಗೆಗಳ ವೋಚರ್‌ಗಳನ್ನೂ ಮಕ್ಕಳಿಗೆ ನೀಡಲಾಯಿತು.

ಇದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವಾಗಿದೆ. `ಆರ್ಟ್ ಫ್ರಮ್ ಹಾರ್ಟ್~ ಹೆಸರಿನ ಎರಡನೆಯ ವರ್ಷದ ಈ ಕಾರ್ಯಕ್ರಮದಲ್ಲಿ `ಎಸ್‌ಒಎಸ್~ ಸಂಸ್ಥೆಯು ನಮ್ಮಂದಿಗೆ ಕೈ ಜೋಡಿಸಿದೆ. ಅವಕಾಶ ವಂಚಿತ ಮಕ್ಕಳು ತಮ್ಮ ಪ್ರತಿಭೆ, ಕಲ್ಪನೆಯನ್ನೂ ಕ್ಯಾನ್ವಾಸ್ ಮೇಲೆ ಬಿಡಿಸುತ್ತಾರೆ.

ಆಯ್ದ ಕೆಲ ಚಿತ್ರಗಳನ್ನು ಈಡನ್‌ರೆಡ್ ಸಂಸ್ಥೆಯ ಗಿಫ್ಟ್ ವೋಚರ್‌ಗಳ ಮೇಲೆ ಪ್ರಕಟಿಸಲಾಗುವುದು. ಕೆಲವನ್ನು 2013ರ ಕ್ಯಾಲೆಂಡರ್‌ಗಳಲ್ಲಿಯೂ ಬಳಸಿಕೊಳ್ಳಲಾಗುವುದು.

ಈ ಮೂಲಕ ಈ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ. ಮುಖ್ಯವಾಹಿನಿಯ ಜನರನ್ನು ಇವರೊಂದಿಗೆ ಬೆಸೆದಂತೆ ಆಗುತ್ತದೆ ಎಂದು ಈಡನ್‌ರೆಡ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಸಂದೀಪ್ ಬ್ಯಾನರ್ಜಿ ಹೇಳುತ್ತಾರೆ. ಕಲಾವಿದ ಶೀಲ್ ಸದ್ವೇಲ್ಕರ್ ಈ ಚಿತ್ರ ಸ್ಪರ್ಧೆಗೆ ತೀರ್ಪುಗಾರರಾಗಿದ್ದು, ಅವರೇ ನಾಲ್ಕು ನಗರಗಳ ಸ್ಪರ್ಧಿಗಳನ್ನು ಆಯ್ಕೆ ಮಾಡುವರು ಎಂದು ವಿವರಣೆ ನೀಡಿದರು ಬ್ಯಾನರ್ಜಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.