ಉನ್ನತ ಉದ್ಯೋಗ, ಕೈತುಂಬ ಸಂಬಳ, ಪಾದ ನೆಲಕ್ಕೆ ತಾಕದಂತೇ ಮನೆಯೊಳಗೆ ಓಡಾಡಲೂ ದುಬಾರಿ ಚಪ್ಪಲಿ, ಎ.ಸಿ. ಕಾರಿನಲ್ಲಿ ಸಂಚರಿಸುತ್ತಾ ಶ್ರೀಮಂತಿಕೆಯ ಡಾಂಭಿಕತೆಯಲ್ಲಿ ಹೆಚ್ಚು ಹೆಚ್ಚು ‘ವಸ್ತು’ನಿಷ್ಠರಾಗುತ್ತಾ ಹೋದಂತೇ ಭಾವಭ್ರಷ್ಟನಾಗುವ ಸೂಕ್ಷ್ಮ ದುರಂತ ಕೂಲಿಂಗ್ ಗ್ಲಾಸ್ ಧರಿಸಿದ ಕಣ್ಣಿಗೆ ಕಾಣುವುದೇ ಇಲ್ಲ.
ಬದುಕಿನ ಪಕ್ವತೆಯೇ ಮೈಮುರಿದು ಎದ್ದಂತೆ ಪಡಸಾಲೆಯಲ್ಲಿ ಹಾಸಿಗೆಯಿಂದ ಎದ್ದು ಕೂತ ವೃದ್ಧೆ, ಕೊಚ್ಚೆಯನ್ನೆಲ್ಲಾ ಚರಂಡಿಯಲ್ಲಿ ಹರಿಯಬಿಟ್ಟು ಸ್ವಚ್ಛನಗುವಿನಿಂದ ನಳನಳಿಸುವ ಪುಟಾಣಿಗಳ ಕಣ್ಣಹೊಳಪು, ಟೊಂಕದ ಮೇಲೆ ಕೊಡಹೊತ್ತು ಇಕ್ಕಟ್ಟಿನ ದಾರಿಯಲ್ಲಿ ಹೊರಟ ಬಾಲೆಯ ತಿರುಗು ನೋಟ, ಸೊಂಟದಿಂದ ಜಾರಿದ ಬಟ್ಟೆಯ ಮರೆತು, ಗೋಡೆಗೊರಗಿದ ಸೈಕಲ್ ಪೆಡಲ್ ತಿರುಗಿಸುವ ಹುಡುಗನ ಪುಳಕ, ಬಾಲಕನ ಕೈಯಲ್ಲಿ ಸೆರೆಸಿಕ್ಕರೂ ಹುಂಜದ ಮುಖದಲ್ಲಿ ಮನೆಮಾಡಿದೆ ನೋಡಿ ಎಂಥ ನಿಶ್ಚಿಂತೆ.
ಡಿ.ಜೆ. ಹಳ್ಳಿಯ ಕೊಳೆಗೇರಿಯ ದೈನಿಕದ ಈ ಒಂದೊಂದು ಬಿಂಬಗಳಲ್ಲಿಯೂ ಚಿಮ್ಮುವ ಜೀವನೋತ್ಸಾಹದ ಚಿಲುಮೆಯನ್ನು ಗಮನಿಸಿ. ಆಧುನಿಕ ಪ್ರಣೀತ ಮನುಷ್ಯ ಬದುಕಿನ ಸೋ ಕಾಲ್ಡ್ ‘ಸ್ಟೇಟಸ್’ ಅನ್ನು ಮರು ವ್ಯಾಖ್ಯಾನಿಸುವಂತೆ ಸವಾಲೆಸೆಯುವ ಈ ಚಿತ್ರಲೋಕ ತೆರೆದುಕೊಂಡಿದ್ದು ಸವಿತಾ ಬಿ.ಆರ್. ಛಾಯಾಗ್ರಹಣದಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.