‘ಪದ್ಮಾವತ್’ ಸಿನಿಮಾದ ಬಗ್ಗೆ ಮುಂದುವರಿದಿರುವ ಟೀಕಾಪ್ರಹಾರಗಳಿಂದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿಚಲಿತರಾಗಿಲ್ಲ. ಬದಲಾಗಿ, ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ.
ಅದ್ದೂರಿ ಮತ್ತು ಯಶಸ್ವಿ ಚಿತ್ರಗಳ ನಿರ್ದೇಶಕ ಎಂಬ ಹೆಗ್ಗಳಿಕೆಗೆ ತಕ್ಕುದಾಗಿ ‘ಪದ್ಮಾವತ್’ ಅನ್ನೂ ಮೀರಿಸುವಂತಹ ಚಿತ್ರ ನೀಡುವುದು ಅವರ ಉದ್ದೇಶ.
ಪಂಜಾಬ್ನ ಕವಿ ಸಾಹಿರ್ ಲೂಧಿಯಾನ್ವಿ ಮತ್ತು ಅವರ ಪ್ರೇಮಿ ಅಮೃತಾ ಪ್ರೀತಂ ಜೀವನಚರಿತ್ರೆಯನ್ನು ತೆರೆಗೆ ತರುವ ಉದ್ದೇಶವಿರುವುದಾಗಿಯೂ, ‘ಪದ್ಮಾವತ್’ ಬಿಡುಗಡೆಯಾದ ಬೆನ್ನಲ್ಲೇ ಚಿತ್ರೀಕರಣ ಶುರು ಮಾಡುವುದಾಗಿಯೂ ಬನ್ಸಾಲಿ ಈ ಹಿಂದೆ ಹೇಳಿದ್ದರು.
ವಿಶೇಷವೆಂದರೆ, ಅವರ ಪಾಲಿನ ಅದೃಷ್ಟದ ಬೆಡಗಿ ದೀಪಿಕಾ ಪಡುಕೋಣೆಯೇ ಈ ಚಿತ್ರಕ್ಕೂ ನಾಯಕಿಯಾಗಲಿದ್ದಾರೆ. ಅಮೃತಾ ಪ್ರೀತಂ ಪಾತ್ರವನ್ನು ದೀಪಿಕಾ ನಿರ್ವಹಿಸಲಿದ್ದಾರೆ. ಸಾಹಿರ್ ಪಾತ್ರಕ್ಕೆ ಮತ್ತೆ ರಣವೀರ್ ಸಿಂಗ್ ಅವರನ್ನೇ ಆರಿಸಿದ್ದಾರೆ ಬನ್ಸಾಲಿ. ಹೊಸ ಚಿತ್ರಕ್ಕೆ ವಯಾಕಾಂ 18 ಮೋಷನ್ ಪಿಕ್ಚರ್ಸ್ ಹಣ ಹೂಡಲು ಮುಂದಾಗಿದ್ದು, ಕನಿಷ್ಠ ₹100 ಕೋಟಿಯಿಂದ ₹150 ಕೋಟಿ ಬಜೆಟ್ನ ಚಿತ್ರ ಇದಾಗಲಿದೆ ಎನ್ನಲಾಗಿದೆ.
ಅಂತೂ ಇಂತೂ ಪ್ರಣಯಪಕ್ಷಿಗಳಂತೆ ಹಾರಾಡುತ್ತಿರುವ ದೀಪಿಕಾ–ರಣವೀರ್ ಜೋಡಿಯ ಭರ್ಜರಿ ಪ್ರೇಮದಾಟವನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡುವ ಅವಕಾಶ ಪ್ರೇಕ್ಷಕರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.