ಆ14 ಬುಧವಾರ ಜಗತ್ತಿನ ಬಹು ದೊಡ್ಡ ನಾಟಕಕಾರ, ಜರ್ಮನಿಯ ಬರ್ಟೋಲ್ಟ್ ಬ್ರೆಕ್ಟ್ ಸ್ಮರಣೆಯ ದಿನ. ಜಗತ್ತಿನ ಹಲವು ದೇಶಗಳ ರಂಗಭೂಮಿ ಹಾಗೂ ಕನ್ನಡ ರಂಗಭೂಮಿಯ ಮೇಲೆ ವಿಶೇಷ ಪ್ರಭಾವ ಬೀರಿರುವ ಬ್ರೆಕ್ಟ್ (1898–1956) ಅರವತ್ತು ವಿಶಿಷ್ಟ ನಾಟಕಗಳನ್ನು ಬರೆದವನು. ವಿಭಿನ್ನವಾದ ನಾಟಕ ಸಿದ್ಧಾಂತ ಹಾಗೂ ರಂಗಭೂಮಿ ಸಿದ್ಧಾಂತಗಳನ್ನು ರೂಪಿಸಿದವನು. ಹಿಟ್ಲರ್ನಂಥ ಸರ್ವಾಧಿಕಾರಿಗಳು ದೇಶಗಳನ್ನು ನಿಯಂತ್ರಿಸುವಾಗ ರಂಗಭೂಮಿ, ನಾಟಕಕಾರರು, ಚಿಂತಕರು ಸತ್ಯವನ್ನು ಎಲ್ಲೆಡೆ ಹಬ್ಬಿಸಬೇಕಾದ ಸವಾಲನ್ನು ಕುರಿತು ಚಿಂತಿಸಿದವನು. ಮಾರ್ಕ್ಸ್ವಾದ ಹಾಗೂ ರಾಜಕೀಯ ರಂಗಭೂಮಿಗಳು ಕಲಾಸೃಷ್ಟಿಗೆ ಪೂರಕವಾಗಿರಬೇಕಾದ ರೀತಿಯನ್ನು ಕಲಿಸಿದವನು.
ವ್ಯವಸ್ಥೆಯ ವಿರುದ್ಧ, ರಾಜಕೀಯ ನಿಯಂತ್ರಣಗಳ ವಿರುದ್ಧ ಕಟು ಪ್ರಶ್ನೆಗಳನ್ನೆತ್ತುತ್ತಾ, ನೋಡುಗರು ರಂಗಾನುಭವದಲ್ಲಿ ತೀರಾ ತನ್ಮಯವಾಗಿ ಕಳೆದು ಹೋಗದೆ, ವಿಚಾರವಂತರಾಗಿರಲು ರಂಗಪ್ರಯೋಗ ಹಾಗೂ ನಟನೆ ಸದಾ ಪ್ರಯತ್ನಿಸುತ್ತಿರಬೇಕೆಂದು ಬ್ರೆಕ್ಟ್ ಒತ್ತಿ ಹೇಳಿದ. ‘ತ್ರೀ ಪೆನ್ನಿ ಅಪೇರ’, ‘ಕಕೇಷಿಯನ್ ಚಾಕ್ ಸರ್ಕಲ್’, ‘ಮದರ್ ಕರೇಜ್’, ‘ಗೆಲಿಲಿಯೋ’ ಮುಂತಾದ ಮಹತ್ವದ ನಾಟಕಗಳನ್ನು ಬರೆದ ಬ್ರೆಕ್ಟ್ ನಾಟಕ ನಿರ್ದೇಶಕನೂ ಆಗಿದ್ದ. ಜಾಗೃತ ಪ್ರಜ್ಞೆಯ, ತೀಕ್ಷ್ಣ ಗ್ರಹಿಕೆಗಳ ಕವಿಯೂ ಆಗಿದ್ದ.
ಸರ್ವಾಧಿಕಾರಿ ಧೋರಣೆಗಳ ಅಬ್ಬರದ ನಮ್ಮ ಈ ಕಾಲದಲ್ಲಿ ‘ಥಿಯೇಟರ್ ತತ್ಕಾಲ್’ ಹಾಗೂ ‘ಲೋಕ ಚರಿತ’ ರಂಗ ತಂಡಗಳು ಬ್ರೆಕ್ಟ್ ಕೊಡುಗೆಯನ್ನು ನೆನೆಯುತ್ತಾ, ಬ್ರೆಕ್ಟ್ ನಾಟಕದ ದೃಶ್ಯಗಳು ಹಾಗೂ ಪದ್ಯಗಳ ಹೆಣಿಗೆಯುಳ್ಳ ‘ಕತ್ತಲ ಕಾಲದಲ್ಲಿ ಹಾಡೋದು ಉಂಟೆ?’ ಎಂಬ ರಂಗ ಮಂಡನೆಯನ್ನು ಪ್ರದರ್ಶಿಸಲಿವೆ. ಬ್ರೆಕ್ಟ್ ನಡೆದು ಬಂದ ದಾರಿಯ ಚಿತ್ರ ಪ್ರದರ್ಶನವೂ ಇದೆ.
ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ. ಸಂಜೆ 7.30ಕ್ಕೆ. ಟಿಕೆಟ್: ₹100
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.