ರಸ್ತೆಯೊಂದರಲ್ಲಿ ದುಷ್ಕರ್ಮಿಗಳಿಬ್ಬರು, ವ್ಯಕ್ತಿಯೊಬ್ಬರನ್ನು ಹೊಡೆದು ಕೊಲ್ಲುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಜತೆಗೆ ಹಂಚಿಕೊಂಡಿರುವ ಮಾಹಿತಿಯೂ ವೈರಲ್ ಆಗಿದೆ. ‘ನೋಡಿ, ಹಿಂದೂ ವ್ಯಕ್ತಿಯೊಬ್ಬರನ್ನು ರೋಹಿಂಗ್ಯಾ ಮುಸ್ಲಿಮರು ಹೊಡೆದು ಕೊಂದಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿರುವ ಇವರು, ದೇಶದ ನಿವಾಸಿಗಳಾದ ಹಿಂದೂಗಳನ್ನು ಹೊಡೆದು ಕೊಲ್ಲುತ್ತಿದ್ದಾರೆ. ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಒದ್ದೋಡಿಸಿ ಎಂದು ಸರ್ಕಾರವನ್ನು ಆಗ್ರಹಿಸಬೇಕು’ ಎಂಬ ವಿವರವನ್ನು ವಿಡಿಯೊಗೆ ನೀಡಲಾಗಿದೆ. ಈ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಹಂಚಿಕೊಳ್ಳಲಾಗಿದೆ.
‘ಇದು ತಿರುಚಲಾದ ಮಾಹಿತಿ’ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ದೆಹಲಿಯ ಆಜಾದ್ಪುರದಲ್ಲಿ 2022ರ ಮಾರ್ಚ್ 3ರಂದು ಈ ಕೊಲೆ ನಡೆದಿದೆ. ವೈರಲ್ ಆಗಿರುವ ಪೋಸ್ಟ್ಗಳಲ್ಲಿ ಇರುವಂತೆ, ಹಿಂದೂವನ್ನು ರೋಹಿಂಗ್ಯಾ ಮುಸ್ಲಿಮರು ಕೊಂದ ಪ್ರಕರಣವಲ್ಲ ಇದು. ಬದಲಿಗೆ ಆಜಾದ್ಪುರದ ನಿವಾಸಿಯಾದ ನರೇಂದರ್ ಅವರನ್ನು, ಅವರ ಸ್ನೇಹಿತರಾದ ರಾಹುಲ್ ಕಾಳಿ, ರೋಹಿತ್ ಕಾಳಿ ಅವರು ಹೊಡೆದು ಕೊಂದಿದ್ದರು. ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿತ್ತು. ಪೊಲೀಸರುಇಬ್ಬರನ್ನೂ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇದೆ. ಆದರೆ, ಸುಳ್ಳು ಮಾಹಿತಿಯೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ಫ್ಯಾಕ್ಟ್ಚೆಕ್ನಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.