Fact Check
ಹರಿಯಾಣದ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಅವರ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹರಿಯಾಣ ರಾಜ್ಯ ಬಿಜೆಪಿ ಘಟಕ ಕೂಡ ವಿಡಿಯೊ ಹಂಚಿಕೊಂಡಿದ್ದು, ಹಿಂದೂಗಳ ದೇವರಾದ ರಾಮನ ಬಗ್ಗೆ ಕಾಂಗ್ರೆಸ್ನ ದ್ವೇಷವನ್ನು ಇದು ಪ್ರತಿನಿಧಿಸುತ್ತದೆ ಎಂದು ಪ್ರತಿಪಾದಿಸಲಾಗಿದೆ. ‘ರಾಮ್ ಟಪಕ್ತಾ ರೆಹತಾ ಹೈ’ ಎನ್ನುವ ವಾಕ್ಯವನ್ನು ಹಿಂದೂಗಳ ನಂಬಿಕೆಗೆ ಹಾಗೂ ರಾಮನಿಗೆ ಮಾಡಿದ ಅವಮಾನ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದು ಸುಳ್ಳು ಪ್ರತಿಪಾದನೆ.
ಯು ಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕುಮಾರಿ ಸೆಲ್ಜಾ ಅವರು, ಬಿಜೆಪಿಯು ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಬಗ್ಗೆ ಮಾತನಾಡುತ್ತಾ, ‘ನೀವು ಆ ಯೋಜನೆಗಳು ಎಷ್ಟರ ಮಟ್ಟಿಗೆ ಪೂರ್ಣಗೊಂಡಿವೆ ಎನ್ನುವುದನ್ನು ನೋಡಬೇಕು. ರಾಮಮಂದಿರವನ್ನೂ ಅವರು ಬಿಡಲಿಲ್ಲ. ಅರ್ಧದಲ್ಲಿಯೇ ಉದ್ಘಾಟನೆ ನೆರವೇರಿಸಿದರು. ಮಳೆಗಾಲದಲ್ಲಿ ರಾಮ ತೊಟ್ಟಿಕ್ಕುತ್ತಾನೆ’ ಎಂದು ಹೇಳಿದ್ದರು. ಈ ಬಗ್ಗೆ ಕೀವರ್ಡ್ ಸರ್ಚ್ ಮಾಡಿದಾಗ, ಹರಿಯಾಣದಲ್ಲಿ ‘ರಾಮ’ ಎನ್ನುವ ಪದಕ್ಕೆ ಹಲವು ಅರ್ಥಗಳಿದ್ದು, ಮಳೆ ಎಂಬುದು ಕೂಡ ಒಂದು ಅರ್ಥವಾಗಿದೆ. ಕುಮಾರಿ ಸೆಲ್ಜಾ ಅವರ ಮಾತುಗಳನ್ನು ಸಂದರ್ಭದಿಂದ ಪ್ರತ್ಯೇಕಿಸಿ, ಅವರು ರಾಮನಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.