ಎನ್ಡಿ ಟಿ.ವಿ. ಸುದ್ದಿವಾಹಿನಿಯ ಸಂಸ್ಥಾಪಕ ಪ್ರಣಯ್ ರಾಯ್, ಪತ್ರಕರ್ತೆ ರಾಧಿಕಾ ರಾಯ್ ಮತ್ತು ‘ದಿ ಹಿಂದು’ ಪತ್ರಿಕೆ ಸಮೂಹದ ಮುಖ್ಯಸ್ಥ ಎನ್. ರಾಮ್ ಅವರು ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದೀವಾಲಾ ಅವರ ಜೊತೆ ಪತ್ರಕರ್ತರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಮತ್ತು ನೂಪುರ್ ಶರ್ಮಾ ಅವರನ್ನು ದೂಷಿಸುವ ಎಲ್ಲರೂ ಒಟ್ಟಿಗೇ ಸೇರಿದ್ದಾರೆ’ ಎಂದು ಈ ಚಿತ್ರಕ್ಕೆ ವಿವರಣೆ ನೀಡಲಾಗಿದೆ. ಬಿಜೆಪಿಯ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ಅವರ ವಿರುದ್ಧ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ಚಿತ್ರ ವೈರಲ್ ಆಗಿದೆ.
ಈ ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಕ್ವಿಂಟ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ತಮಿಳುನಾಡಿನ ‘ಮೈಂಡ್ ಎಸ್ಕೇಪ್ಸ್ ಕ್ಲಬ್’ ಸಂಸ್ಥೆ ಈ ವರ್ಷದ ಆರಂಭದಲ್ಲಿ ಊಟಿಯಲ್ಲಿ ಆಯೋಜಿಸಿದ್ದ ಭೋಜನಕೂಟದ ಚಿತ್ರ ಇದಾಗಿದೆ. ತಮಿಳುನಾಡಿನ ಹಣಕಾಸು ಸಚಿವ ಪಿ. ತ್ಯಾಗರಾಜನ್, ಸಿಪಿಎಂ ನಾಯಕರಾದ ಬೃಂದಾ ಕಾರಟ್, ಪ್ರಕಾಶ್ ಕಾರಟ್ ಮತ್ತು ಮೈಂಡ್ ಎಸ್ಕೇಪ್ಸ್ ಕ್ಲಬ್ ಸಂಸ್ಥಾಪಕಿ ದೀಪಾಲಿ ಸಿಖಂಡ್ ಅವರು ಪತ್ರಕರ್ತರ ಜೊತೆ ಇದ್ದಾರೆ. ಈ ವೈರಲ್ ಚಿತ್ರದ ಕುರಿತು ಎನ್. ರಾಮ್ ಅವರೂ ಕೂಡಾ ಸ್ಪಷ್ಟನೆ ನೀಡಿದ್ದು, ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ’ ಎಂದು ದಿ ಕ್ವಿಂಟ್ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.