ನೂತನ ಕೃಷಿ ಸುಧಾರಣಾ ಕಾಯ್ದೆಗಳನ್ನು ಬೆಂಬಲಿಸಿ ಹರಿಯಾಣದ ರೈತರು ಜನವರಿ 10ರಂದು ಕರ್ನಾಲ್ ಜಿಲ್ಲೆಯಲ್ಲಿ ರೈತ ಮಹಾಪಂಚಾಯತ್ ಅನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಭಾಗವಹಿಸಬೇಕಿತ್ತು. ಆದರೆ ಹವಾಮಾನ ಸರಿಯಿಲ್ಲದ ಕಾರಣ ಖಟ್ಟರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹೆಲಿಪ್ಯಾಡ್ನಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಖಟ್ಟರ್ ಅವರು ರೈತ ಮಹಾಪಂಚಾಯತ್ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರು ಹಾಗೇ ವಾಪಸ್ ಆದರು ಎಂದು ಹಲವು ಸುದ್ದಿ ವಾಹಿನಿಗಳು ವರದಿ ಪ್ರಕಟಿಸಿವೆ. ಈ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆದರೆ ಇದು ಸುಳ್ಳು ಸುದ್ದಿ ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಜನವರಿ 10ರಂದು ಮನೋಹರ ಲಾಲ್ ಖಟ್ಟರ್ ಅವರು ರೈತ ಪಂಚಾಯತ್ನ ಸ್ಥಳವನ್ನು ತಲುಪುವ ಮುನ್ನವೇ, ಈ ಕಾಯ್ದೆಗಳನ್ನು ವಿರೋಧಿಸುವ ರೈತರು ಆ ಸ್ಥಳವನ್ನು ತಲುಪಿದ್ದರು. ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಆರಂಭಿಸಿದರು. ಕಾಯ್ದೆಯನ್ನು ಬೆಂಬಲಿಸುವ ರೈತರಿಗಿಂತ, ವಿರೋಧಿಸುವ ರೈತರ ಸಂಖ್ಯೆ ಹಲವು ಪಟ್ಟು ಹೆಚ್ಚು ಇತ್ತು. ಭಾರಿ ಪ್ರತಿಭಟನೆ ನಡೆದ ಕಾರಣ, ಮನೋಹರ ಲಾಲ್ ಖಟ್ಟರ್ ಅವರು ರೈತ ಮಹಾಪಂಚಾಯತ್ನಲ್ಲಿ ಭಾಗಿಯಾಗದೆ ವಾಪಸಾದರು ಎಂದು ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ. ಆದರೆ ಕೆಲವರು ಈ ಸುದ್ದಿಯನ್ನು ತಿರುಚಿ, ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.