ADVERTISEMENT

ಅಂತರಿಕ್ಷ- ದೇವಾಸ್ ಸಮಗ್ರ ತನಿಖೆ: ಪ್ರಧಾನಿಗೆ ನಾಯರ್ ಪತ್ರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 10:55 IST
Last Updated 26 ಫೆಬ್ರುವರಿ 2012, 10:55 IST

ಬೆಂಗಳೂರು (ಪಿಟಿಐ): ವಿವಾದಾತ್ಮಕ ಅಂತರಿಕ್ಷ- ದೇವಾಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರತ್ಯೂಷ ಸಿನ್ಹ ನೇತೃತ್ವದ ಸಮಿತಿ ವರದಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ~ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಧಾನ ಮಂತ್ರಿ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

ದೇವಾಸ್ ಅರಂಭವಾದಂದಿನಿಂದ ಅಂತರಿಕ್ಷ- ದೇವಾಸ್ ಒಪ್ಪಂದ ರದ್ಧತಿ ಹಾಗೂ ನಾನು ಮತ್ತು ಇತರ ಮೂವರು ವಿಜ್ಞಾನಿಗಳ ವಿರುದ್ಧ ಪ್ರತ್ಯೂಷ ಸಿನ್ಹ ಸಮಿತಿ ಆಧಾರದಲ್ಲಿ ಕೈಗೊಳ್ಳಲಾಗಿರುವ ಕ್ರಮದವರೆಗಿನ ಎಲ್ಲ ವಿದ್ಯಮಾನಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು~ ಎಂಬುದಾಗಿ ಪ್ರಧಾನ ಮಂತ್ರಿಗಳ ಸಚಿವಾಲಯಕ್ಕೆ ಬರೆದ ತಮ್ಮ ಎರಡನೇ ಪತ್ರದಲ್ಲಿ ನಾಯರ್ ಒತ್ತಾಯಿಸಿದ್ದಾರೆ.

ಎರಡನೇ ಪತ್ರವನ್ನು ಅವರು ಕಳೆದವಾರದ ಮಧ್ಯಭಾಗದಲ್ಲಿ ಕಳುಹಿಸಿದ್ದು, ~ಅಂತರಿಕ್ಷ- ದೇವಾಸ್ ಒಪ್ಪಂದ ರದ್ಧತಿ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಬಾಹ್ಯಾಕಾಶ ಇಲಾಖೆಯು ಸಂಪೂರ್ಣವಾಗಿ ತಪ್ಪು ಮಾಡಿದೆ ಎಂದು ದೂರಿದ್ದಾರೆ.

ಬಾಹ್ಯಾಕಾಶ ಇಲಾಖೆಗೆ ಸಂಬಂಧಿಸಿದ ವ್ಯಕ್ತಿಗಳು ಒಂದೋ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅಥವಾ ಅವರ ಮೇಲೆ ಯಾವುದೋ ಕಡೆಯಿಂದ ಬಲವಾದ ಒತ್ತಡ ಬಿದ್ದಿದೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆಯೇ ನಾಯರ್ ಟೀಕಿಸಿದರು.

ಸರ್ಕಾರದ ಪ್ರಮುಖ ಹುದ್ದೆಗಳಿಗೆ ತಮ್ಮನ್ನು ಹಾಗೂ ಇತರ ಮೂವರು ವಿಜ್ಞಾನಿಗಳನ್ನು ನಿರ್ಬಂಧಿಸಿದ ಸರ್ಕಾರವು ಕೈಗೊಂಡ ಕ್ರಮಕ್ಕಾಗಿ ಇಸ್ರೋ ಹಾಲಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರನ್ನು ಈ ಹಿಂದೆ ನಾಯರ್ ದೂಷಿಸಿದ್ದರು.

ಸಿನ್ಹ ನೇತೃತ್ವದ ಪಂಚ ಸದಸ್ಯ ಸಮಿತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಾಯರ್, ವರದಿಯಲ್ಲಿ ವಿಧಿ ವಿಧಾನಗಳನ್ನು ಸಮರ್ಕವಾಗಿ ಪಾಲಿಸಿಲ್ಲ. ಪರಿಣಾಮವಾಗಿ ಸರ್ಕಾರವು ತನ್ನ ಹಾಗೂ ಇತರ ಮೂವರು ವಿಜ್ಞಾನಿಗಳ ವಿರುದ್ಧ ಕ್ರಮ ಕೈಗೊಂಡಿತು ಎಂದು ನಾಯರ್ ಟೀಕಿಸಿದರು.

ಪ್ರಧಾನಮಂತ್ರಿ ಸಚಿವಾಲಯದ ಕ್ರಮಕ್ಕೆ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಸೇರಿದಂತೆ ವಿಜ್ಞಾನಿಗಳ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ರೊದ್ದಂ ನರಸಿಂಹ ಅವರೂ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.