ಬಾಲಸೋರ್, ಒಡಿಶಾ (ಪಿಟಿಐ): ಒಡಿಶಾ ತೀರ ಪ್ರದೇಶದಲ್ಲಿರುವ ವೀಲ್ಹರ್ ದ್ವೀಪದಿಂದ ಭಾನುವಾರ ನಡೆಸಲಾದ ಭಾರತದ ಸ್ವದೇಶಿ ನಿರ್ಮಿತ ಪರಮಾಣು ಸಾಮರ್ಥ್ಯದ `ಅಗ್ನಿ-5' ದೂರಗಾಮಿ ಖಂಡಾಂತರ ಕ್ಷಿಪಣಿಯ ಎರಡನೇ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಕ್ಷಿಪಣಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿರುವ ಭಾರತ, ಸ್ವದೇಶಿ ನಿರ್ಮಿತ ಪರಮಾಣು ಸಾಮರ್ಥ್ಯದ ಈ ಕ್ಷಿಪಣಿಯು ಐದು ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. ಕ್ಷಿಪಣಿಯನ್ನು ಸಮಗ್ರ ಪರೀಕ್ಷಾ ವಲಯದ ಉಡ್ಡಯನ ಸಂಕೀರ್ಣ-4ರ ಸಂಚಾರಿ ಉಡಾವಣಾ ವಾಹನದಿಂದ ಬೆಳಿಗ್ಗೆ ಸುಮಾರು 8:50 ಗಂಟೆಗೆ ನಡೆಯಿತು.
`2012 ಏಪ್ರಿಲ್ನಲ್ಲಿ ಕೈಗೊಂಡಿದ್ದ ಮೊದಲ ಪರೀಕ್ಷೆಯಂತೆಯೇ ಅಗ್ನಿ-5 ಕ್ಷಿಪಣಿಯ ಎರಡನೇ ಪರೀಕ್ಷೆಯೂ ಯಶಸ್ವಿಯಾಗಿದೆ' ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ವಕ್ತಾರ ರವಿ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಮೇಲ್ಮೈಯಿಂದ-ಮೇಲ್ಮೈಗೆ ಚಿಮ್ಮುವ ಸಾಮರ್ಥ್ಯದ ಈ ಕ್ಷಿಪಣಿ, ಒಂದು ಟನ್ಗೂ ಹೆಚ್ಚು ತೂಕದ ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲುದು ಹಾಗೂ ಚೀನಾ ಇಲ್ಲವೇ ಪಾಕಿಸ್ತಾನದ ಕೇಂದ್ರ ಭಾಗಕ್ಕೆ ನುಗ್ಗಬಲ್ಲುದು.
ರಕ್ಷಣಾ ವಿಭಾಗದ ವಿಜ್ಞಾನಿಗಳು ಹಾಗೂ ಪರಿಣತರ ಸಮ್ಮುಖದಲ್ಲಿ ಭಾನುವಾರ ನಡೆಸಲಾದ ಉಡಾವಣೆ ಎರಡನೇಯದಾಗಿದ್ದು, ಮೊದಲ ಪರೀಕ್ಷೆ 2012ರ ಏಪ್ರಿಲ್ 19 ರಂದು ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.