ADVERTISEMENT

ಅಡಿಕೆ ನಿಷೇಧ ಇಲ್ಲ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ನವದೆಹಲಿ: ‘ಅಡಿಕೆ ನಿಷೇಧಿಸುವ ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ. ಅಡಿಕೆ ನಿಷೇಧ ಆಗಲಿದೆ ಎನ್ನುವ ಸುದ್ದಿಯನ್ನು ಕೆಲವರು ರಾಜಕೀಯ ದುರುದ್ದೇಶದಿಂದ ಪ್ರಚಾರ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಸ್ಪಷ್ಟಪಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂನಬಿ ಆಜಾದ್‌ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಸಿದ್ದರಾಮಯ್ಯ, ‘ಅಡಿಕೆ ನಿಷೇಧ ವಿಚಾರ ಸಚಿವರಿಗೇ ಗೊತ್ತಿಲ್ಲ. ಅವರ ಗಮನಕ್ಕೇ ಬರದೆ ಹೇಗೆ ನಿಷೇಧಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ಆರೋಗ್ಯ ಸಚಿವರ ಜತೆ ಚರ್ಚೆ ಮಾಡಿದೆ. ಅಧಿಕೃತವಾಗಿ ಪತ್ರ ಬರೆದಿದ್ದೇನೆ. ಪತ್ರಕ್ಕೆ ಉತ್ತರ ಬರೆ­ಯುವುದಾಗಿ ಹೇಳಿದ್ದಾರೆ. ಅಡಿಕೆ ಹಾನಿಕಾರಕ ಅಲ್ಲ. ಅದರಲ್ಲಿ ಔಷಧಿ ಗುಣಗಳಿವೆ ಎಂಬ ಕೇಂದ್ರ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವರದಿ ನೀಡಿದೆ. ಈ ವರದಿ ಕುರಿತು ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಸುಪ್ರೀಂ ಕೋರ್ಟ್‌ ಮುಂದೆ ಗುಟ್ಕಾ ನಿಷೇಧ ಕುರಿತ ಪ್ರಕರಣ ವಿಚಾರಣೆ­ಯಲ್ಲಿದೆ. ಅಡಿಕೆ ನಿಷೇಧಿಸುವುದಾಗಿ ಹೇಳುವ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಖಚಿತ­ಪಡಿಸಿದರು.

ಅಡಿಕೆ ಹಾನಿಕಾರಕ ಅಲ್ಲ. ಸಾವಿರಾರು ವರ್ಷದಿಂದ ಜನ ಅಡಿಕೆ ತಿನ್ನುತ್ತಿದ್ದಾರೆ. ಕೆಲವರು ಸತ್ಯ ತಿಳಿಯದೆ ರಾಜಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಡಿಕೆ ಗುಟ್ಕಾ ಜತೆ ಸೇರಿದರೆ ಮಾತ್ರ ಆರೋಗ್ಯಕ್ಕೆ ಹಾನಿಕಾರಕ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ರಾಜ್ಯದ ತಂಬಾಕು ಬೆಳೆಗಾರರ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ವಾಣಿಜ್ಯ ಸಚಿವ ಆನಂದ ಶರ್ಮ ಅವರ ಜತೆ ಚರ್ಚಿಸಿದರು. ಬ್ಯಾರನ್‌ ತಂಬಾಕಿಗೆ ಆಂಧ್ರದಲ್ಲಿ 2200 ಕೆ.ಜಿ ನಿಗದಿ ಮಾಡಲಾಗಿದೆ. ಕರ್ನಾಟಕದಲ್ಲಿ ಇದು ಕೇವಲ 1700 ಕೆ.ಜಿ ಆಗಿದೆ. ಮಿತಿ ಮೀರಿದ ತಂಬಾಕಿಗೆ ದಂಡ ಹಾಕಲಾಗುತ್ತಿದೆ. ಈ ತಾರತಮ್ಯ ನಿವಾರಣೆ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

ಅನುಮತಿ ಇಲ್ಲದೆ ಬೆಳೆಯುವ ತಂಬಾಕಿಗೆ ಶೇ 7ರಷ್ಟು ದಂಡ ಹಾಕಲಾಗುತ್ತಿದೆ. ಈ ಮೊದಲು ಶೇ  22ರಷ್ಟು ದಂಡ ಹಾಕಲಾಗುತ್ತಿತ್ತು. ಈಗ ಅದನ್ನು ಶೇ 7ಕ್ಕೆ ಇಳಿಕೆ ಮಾಡಲಾಗಿದೆ. ತಂಬಾಕು ಮಿತಿ ಮೀರಿ ಬೆಳೆಯುವುದನ್ನು ನಿಯಂತ್ರಿಸಲು ದಂಡ ಹಾಕಲಾಗುತ್ತಿದೆ. ಆದರೆ, ಅದನ್ನೂ ಕೈಬಿಡುವಂತೆ ಆಗ್ರಹಿಸಲಾಗಿದೆ ಎಂದು ನುಡಿದರು.

ಸರ್ಕಾರ ನಿಗದಿ ಮಾಡಿರುವ ಪ್ರಮಾಣದಲ್ಲಿ ಲೆವಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿರುವ ಗಿರಣಿ ಮಾಲೀಕರ ಜತೆ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮತ್ತು ಸಹಕಾರ ಸಚಿವ ಮಹದೇವ ಪ್ರಸಾದ್‌ ಮಾತನಾಡಿದ್ದಾರೆ. ಮಾತುಕತೆ ಮತ್ತೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ವರ್ಷ ಗಿರಣಿಗಳಿಂದ ಎರಡು ಲಕ್ಷ ಟನ್‌ ಲೆವಿ ಅಕ್ಕಿ ಸಂಗ್ರಹಿಸಲಾಗಿದೆ. ಎರಡು ವರ್ಷದ ಹಿಂದೆ ಮೂರು ಲಕ್ಷ ಟನ್‌ ಪಡೆಯಲಾಗಿದೆ. ಆಗ ಅನ್ನ ಭಾಗ್ಯ ಯೋಜನೆ ಜಾರಿಯಲ್ಲಿ ಇರಲಿಲ್ಲ. ಅಕ್ಕಿಗೆ ಕ್ವಿಂಟಲ್‌ಗೆ ರೂ 2,400 ಹಾಗೂ ಭತ್ತಕ್ಕೆ ರೂ 1,600  ನಿಗದಿಪಡಿಸಲಾಗಿದೆ ಎಂದರು ಸಿದ್ದರಾಮಯ್ಯ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನರ್ಮ್ ಯೋಜನೆಯಡಿ 2,180 ಬಸ್ಸುಗಳನ್ನು ನೀಡಿದೆ. ಇನ್ನು ಹೆಚ್ಚುವರಿ ಬಸ್ಸುಗಳನ್ನು ನೀಡುವಂತೆ ನಗರಾಭಿವೃದ್ಧಿ ಸಚಿವ ಕಮಲನಾಥ್‌ ಅವರಿಗೆ ಕೇಳಲಾಗಿದೆ. ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ’
ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ರದ್ದಾಗಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ರಾಜ್ಯಕ್ಕೆ ಹಿಂತಿರುಗಿದ ತಕ್ಷಣ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಗಳ ಕಾಯ್ದೆಯನ್ನು ಜಾರಿಗೆ ತರಲು ನಿರ್ಧರಿಸಿರುವ ವಿಷಯ ಗಮನಕ್ಕೆ ಬಂದಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರಿಗೆ ಹಿಂತಿರುಗಿದ ತಕ್ಷಣ ಉನ್ನತ ಶಿಕ್ಷಣ ಇಲಾಖೆ ಆದೇಶ ತರಿಸಿ ನೋಡುತ್ತೇನೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಆಶ್ವಾಸನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT