ADVERTISEMENT

ಅಡ್ವಾಣಿ ರಥಯಾತ್ರೆ ಮಾರ್ಗದಲ್ಲಿ ಬಾಂಬ್ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 5:55 IST
Last Updated 28 ಅಕ್ಟೋಬರ್ 2011, 5:55 IST

ಮದುರೈ (ಐಎಎನ್ಎಸ್): ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಎರಡನೇ ಹಂತದ ~ಜನಚೇತನ~ ರಥಯಾತ್ರೆಯು ಸಾಗುವ ಮಾರ್ಗದಲ್ಲಿ ಮದುರೈ ಸಮೀಪದ ಸೇತುವೆಯ ಅಡಿ ಒಂದು ಕೊಳವೆ ಬಾಂಬ್ ಇದ್ದುದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

~ಅಡ್ವಾಣಿ ಅವರ ರಥಯಾತ್ರೆಯು ಸಾಗಲಿದ್ದ ರಸ್ತೆಯಲ್ಲಿರುವ ಸೇತುವೆ ಕೆಳಗೆ ಬಾಂಬ್ ಇರುವುದನ್ನು ಕಂಡ ಕೆಲವು ಜನರು ಅದನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು~ ಎಂದು ವಿವರ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, ~ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಂಬ್ ಅನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ~ ಎಂದು ತಿಳಿಸಿದ್ದಾರೆ.

ಚೆನ್ನೈನಿಂದ 450 ಕಿ.ಮೀ ದೂರದಲ್ಲಿರುವ ಮದುರೈ ಸಮೀಪದ ಅಲಮ್ ಪಟ್ಟಿ ಎಂಬ ಸ್ಥಳದಲ್ಲಿನ ಸೇತುವೆ ಅಡಿ ಕೊಳವೆ ಬಾಂಬ್ ಇಟ್ಟಿರುವುದು ಪತ್ತೆಯಾಗಿದೆ.

ADVERTISEMENT

ಬಿಹಾರದಿಂದ ಆರಂಭವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಸಂಚರಿಸಿದ್ದ ಅಡ್ವಾಣಿ ಜನಚೇತನ ರಥಯಾತ್ರೆಯು ದೀಪಾವಳಿಯ ಮುಮಚೆ ಕೊನೆಗೊಂಡಿತ್ತು. ಶುಕ್ರವಾರ ಅಡ್ವಾಣಿ ಅವರು ತಮ್ಮ ರಥಯಾತ್ರೆಯ ಎರಡನೇ ಹಂತದ ಸಂಚಾರವನ್ನು ತಮಿಳುನಾಡಿನ ಮದುರೈನಿಂದ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.