ಪುಣೆ (ಐಎಎನ್ ಎಸ್): ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಣ್ಣಾ ಹಜಾರೆ ಅವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ತಿಳಿಸಿದ್ದು, ಇದರಿಂದಾಗಿ ಐದು ರಾಜ್ಯಗಳಲ್ಲಿ ಇಷ್ಟರಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಅವರು ಪ್ರಚಾರಾಂದೋಲನ ಕೈಗೊಳ್ಳುವದರ ಬಗ್ಗೆ ಅನುಮಾನ ಉಂಟಾಗಿದೆ.
ಶ್ವಾಸಕೋಶದಲ್ಲಿನ ಸೋಂಕಿಗಾಗಿ ಅಣ್ಣಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಪರಾಗ್ ಸಂಚೇತಿ ಅವರು, ಒಂದು ವಾರ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ನಂತರ ಅವರ ಆರೋಗ್ಯ ಸ್ಥಿತಿಯನ್ನು ಪುನಃ ಪರಿಶೀಲಿಸಲಾಗುವದು ಎಂದಿದ್ದಾರೆ. ಜೊತೆಗೆ, ~ಅಣ್ಣಾ ಅವರು ಯಾವುದೇ ಒತ್ತಡಕ್ಕೆ ಒಳಗಾಗದೇ ಒಂದು ತಿಂಗಳು ವಿಶ್ರಾಂತಿ ಪಡೆಯುವುದು ಅಗತ್ಯ, ಉಪವಾಸ ಕೂಡುವಂತಿಲ್ಲ~ ಎಂದೂ ಸಂಚೇತಿ ಹೇಳಿದ್ದಾರೆ.
ಎದೆಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಷ್ಟಾಚಾರ ವಿರುದ್ಧದ ಪ್ರಬಲ ಲೋಕಪಾಲ್ ಜಾರಿ ಕುರಿತು ಜನಾಂದೋಲನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಭಾನುವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.