ADVERTISEMENT

ಅತ್ಯಾಚಾರಿಗಳಿಗೆ ರಕ್ಷಣೆ ಆರೋಪ: ಒಡಿಶಾ ಸಚಿವ ಮಹಾರಥಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 9:45 IST
Last Updated 19 ಜನವರಿ 2012, 9:45 IST

ಭುವನೇಶ್ವರ (ಐಎಎನ್ಎಸ್): ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ರಕ್ಷಣೆ ಒದಗಿಸುತ್ತಿದ್ದಾರೆ ಎಂಬುದಾಗಿ ವಿರೋಧ ಪಕ್ಷಗಳ ಆರೋಪಕ್ಕೆ ಗುರಿಯಾದ ಒಡಿಶಾ ಸರ್ಕಾರದ ಕೃಷಿ ಸಚಿವ ಪ್ರದೀಪ ಮಹಾರಥಿ ಅವರು ಗುರುವಾರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.

~ನೈತಿಕ ನೆಲೆಯಲ್ಲಿ ನಾನು ರಾಜೀನಾಮೆ ಸಲ್ಲಿಸಿದ್ದೇನೆ~ ಎಂದು ಮಹಾರಥಿ ಅವರು ರಾಜೀನಾಮೆ ಪತ್ರ ಸಲ್ಲಿಕೆಯ ಬಳಿಕ ಐಎಎನ್ ಎಸ್ ಗೆ ತಿಳಿಸಿದರು.

ಕಳೆದ ವರ್ಷ ನವೆಂಬರ್ 28ರಂದು ರಾಜ್ಯದ ರಾಜಧಾನಿ ಭುವನೇಶ್ವರದಿಂದ 10 ಕಿ.ಮೀ. ದೂರದ ಅರ್ಜುನಗೊಡ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು 19ರ ಹರೆಯದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪವಿತ್ತು. ಈ ಅಪರಾಧ ನಡೆದ ಸ್ಥಳವು ಮಹಾರಥಿ ಅವರು ಪ್ರತಿನಿಧಿಸುವ ಪಿಪಿಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ವಿರೋಧ ಪಕ್ಷಗಳು ನಮ್ಮ ಸರ್ಕಾರದ ಮತ್ತು ಮುಖ್ಯಮಂತ್ರಿಯ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸುತ್ತಿವೆ. ಮುಖ್ಯಮಂತ್ರಿ ಮತ್ತು ಸರ್ಕಾರದ ವರ್ಚಸ್ಸು ರಕ್ಷಣೆಗಾಗಿ ನಾನು ರಾಜೀನಾಮೆ ನೀಡಿದ್ದೇನೆ ಎಂದು ಮಹಾರಥಿ ಹೇಳಿದರು.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಇಲ್ಲಿಗೆ 26 ಕಿ.ಮೀ. ದೂರದ ಕಟಕ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ.

 ಲೈಂಗಿಕ ಪೀಡನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾರ ವಿರುದ್ಧ ಈ ಮಹಿಳೆ ದಿಟ್ಟ ಹೋರಾಟ ನಡೆಸಿದ್ದರೋ ಅದೇ ವ್ಯಕ್ತಿಗಳಿಂದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದಾಗಿ ಈ ಮಹಿಳೆಯ ಕುಟುಂಬ ಸದಸ್ಯರು ಆಪಾದಿಸಿದ್ದಾರೆ.

ದುಷ್ಕೃತ್ಯಕ್ಕೆ ಒಳಗಾದ ಮಹಿಳೆಗೆ ಇತ್ತೀಚೆಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ನಿರಾಕರಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಕೆಲವು ಪತ್ರಕರ್ತರು ಆಕೆಯ ಕುಟುಂಬ ಸದಸ್ಯರನ್ನು ಸಂದರ್ಶಿಸಿ ಘಟನೆಯ ಬಗ್ಗೆ ವರದಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.