ನವದೆಹಲಿ (ಪಿಟಿಐ): ಅಮೆರಿಕದ ಬೇಹುಗಾರಿಕೆ ಇಲಾಖೆಯಿಂದ ಸೈಬರ್ ದಾಳಿಗೊಳಗಾದ ಐದನೇ ರಾಷ್ಟ್ರ ಭಾರತ ಎಂಬ ವರದಿ ಹಿನ್ನೆಲೆಯಲ್ಲಿ ಈ ಕುರಿತು ಭಾರತವು ಆ ರಾಷ್ಟ್ರದಿಂದ ಸೋಮವಾರ ವಿವರಣೆ ಬಯಸಿದೆ.
`ನಾಗರಿಕರ ಖಾಸಗಿ ಮಾಹಿತಿಗೆ ಸಂಬಂಧಿಸಿದ ದೇಶದ ಕಾನೂನು ಉಲ್ಲಂಘಿಸಿರುವುದು ಸಾಬೀತಾದರೆ ಅದು ಬಹಳ ಅಕ್ಷಮ್ಯ' ಎಂದು ಭಾರತ ಸ್ಪಷ್ಟಪಡಿಸಿದೆ.
`ಮಾಹಿತಿಗೆ ಕನ್ನ ಹಾಕಿರುವ ವಿಷಯ ಕೇಳಿ ಬಹಳ ಆಶ್ಚರ್ಯವಾಯಿತು. ಅಲ್ಲದೇ ತೀವ್ರ ಕಳವಳಗೊಂಡಿದ್ದೇವೆ. ಈ ಕುರಿತು ಅಮೆರಿಕದ ಬಳಿ ಚರ್ಚೆ ನಡೆಸಲು ಸಂಧಾನಕಾರರನ್ನು ಕಳುಹಿಸಲಾಗುವುದು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
`ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ ಎಂದು ನಾವು ಭಾವಿಸಿದ್ದೇವೆ. ಎರಡೂ ರಾಷ್ಟ್ರಗಳ ಸಂಧಾನಕಾರರ ಮಾತುಕತೆ ವೇಳೆ ಸೈಬರ್ ದಾಳಿ ಕುರಿತ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.