ADVERTISEMENT

ಅಸಾಂಪ್ರದಾಯಿಕ ಆರ್ಥಿಕ ನೀತಿ ಕೈಬಿಡಲು ಕರೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಅನುಸರಿಸಿಕೊಂಡು ಬರುತ್ತಿರುವ ಅಸಾಂಪ್ರದಾಯಿಕ ಆರ್ಥಿಕ ನೀತಿಯನ್ನು ನಿಯಮಿತವಾಗಿ ಕೈಬಿಡಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಕರೆ ನೀಡಿದ್ದಾರೆ.

ಜಿ-20 ಶೃಂಗ ಸಭೆಗೆ ಭಾಗವಹಿಸಲು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ತೆರಳುವ ಮುನ್ನ ಹೇಳಿಕೆ ನೀಡಿರುವ ಪ್ರಧಾನಿ,  ಭಾರತ ಹಾಗೂ ಇತರ ನಾಲ್ಕು ಬ್ರಿಕ್ಸ್ ರಾಷ್ಟ್ರಗಳಲ್ಲಿನ ನಿಧಾನ ಗತಿಯ ಪ್ರಗತಿಯ ಹಿನ್ನೆಲೆಯಲ್ಲಿ ಅಸಾಂಪ್ರದಾಯಿಕ ಆರ್ಥಿಕ ನೀತಿಯಿಂದ ದೂರ ಸರಿಯಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

`ಉದ್ಯಮಶೀಲ ರಾಷ್ಟ್ರಗಳಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬಂದರೂ, ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ಶಕ್ತಿಗಳಲ್ಲಿ ಹಿಂಜರಿತ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಸಾಂಪ್ರದಾಯಿಕ ಆರ್ಥಿಕ ನೀತಿಯನ್ನು ನಿಯಮಿತವಾಗಿ ಕೈಬಿಡುವ ಅಗತ್ಯವನ್ನು ಜಿ-20 ಶೃಂಗ ಸಭೆಯಲ್ಲಿ ಒತ್ತಿ ಹೇಳುತ್ತೇನೆ' ಎಂದು ಸಿಂಗ್ ಹೇಳಿದ್ದಾರೆ.

ಆರ್ಥಿಕ ಸ್ಥಿರತೆ ಬಲಪಡಿಸುವುದು, ರೂಪಾಯಿ ಮೌಲ್ಯ ವರ್ಧನೆ ಹಾಗೂ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಭಾರತವು ಹಲವಾರು ಕ್ರಮಗಳನ್ನು ಕೈಗೊಂಡಿರುವ ಹೊತ್ತಿನಲ್ಲಿಯೇ ಜಿ-20 ಶೃಂಗಸಭೆ ನಡೆಯುತ್ತಿದೆ ಎಂದು ಉಲ್ಲೇಖಿಸಿರುವ ಅವರು, `ಆರ್ಥಿಕ ಪ್ರಗತಿಯನ್ನು ಪುನರ್‌ಪರಿಶೀಲಿಸಲು ಸ್ಥಿರ ಹಾಗೂ ಉತ್ತೇಜನಕಾರಿ ಬಾಹ್ಯ ಆರ್ಥಿಕ ವಾತಾವರಣದ ಅಗತ್ಯವಿದೆ. ಇದಕ್ಕೆ ಶೃಂಗ ಸಭೆಯು ಮಹತ್ವದ ವೇದಿಕೆಯಾಗಿದೆ' ಎಂದಿದ್ದಾರೆ.

ಜಿ-20 ದೇಶಗಳು
ಭಾರತ, ಚೀನಾ, ಅಮೆರಿಕ, ಬ್ರಿಟನ್, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ ಹಾಗೂ ಐರೋಪ್ಯ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.