ADVERTISEMENT

ಅಸ್ಸಾಂ, ಅರುಣಾಚಲದಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಜೊರ್‌ಹಟ್ (ಪಿಟಿಐ): ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ದಂಡೆಯಲ್ಲಿರುವ ಮಜುಲಿ, ಕಮಲ್‌ಬರಿ, ನೆಮಟಿಘಾಟ್ ಮತ್ತು ಜಂಜೈಮುಖ್ ಸೇರಿದಂತೆ 45ಕ್ಕೂ ಹೆಚ್ಚು ಗ್ರಾಮಗಳ 25,000 ಸಾವಿರ ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಪಡೆಯ ಹತ್ತು ಜನರ ತಂಡ ದೋಣಿ ಮತ್ತು ಜೀವರಕ್ಷಣೆಯ ಸಲಕರಣೆಗಳೊಂದಿಗೆ ಮಜುಲಿ ದ್ವೀಪ ಗ್ರಾಮ ತಲುಪಿದೆ. ಪ್ರವಾಹ ಬಂದಿದ್ದರಿಂದ ಮಜುಲಿಯ ಘಟ್ಟ ಮತ್ತು ಘಟ್ಟದ ಕೆಳಗಿನ ಪ್ರದೇಶಗಳ ಸಂಪರ್ಕ ಕಷ್ಟಸಾಧ್ಯವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಡಳಿತ ಭಾನುವಾರ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದೆ.

ಇಟಾನಗರ ವರದಿ: ಹವಾಮಾನದಲ್ಲಿ ಬದಲಾವಣೆ ಆಗುವುದರೊಂದಿಗೆ ವರ್ಷಧಾರೆಯಿಂದ ಉಕ್ಕಿ ಹರಿಯುತ್ತಿದ್ದ ಪೂರ್ವ ಅರುಣಾಚಲ ಪ್ರದೇಶದ ನದಿಗಳ ಹರಿವಿನ ಪ್ರಮಾಣದಲ್ಲಿ ಇಳಿಮುಖ ಕಂಡುಬಂದಿದೆ. ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದರಿಂದ ಪಶ್ಚಿಮ ಮತ್ತು ಘಟ್ಟದ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಪ್ರವಾಹದಿಂದಾಗಿ ಕನಿಷ್ಠ 13,246 ಜನರು ತೊಂದರೆಗೆ ಒಳಗಾಗಿದ್ದಾರೆ.

ಏಳು ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದೆ. ಮುಖ್ಯಮಂತ್ರಿ ನಬಮ್ ಟುಕಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹರಿಕೃಷ್ಣ ಅವರೊಂದಿಗೆ ಶನಿವಾರ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT