ADVERTISEMENT

ಆಂಧ್ರ ವಿಧಾನಸಭೆ: ಪ್ರತಿಧ್ವನಿಸಿದ ತೆಲಂಗಾಣ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:10 IST
Last Updated 13 ಫೆಬ್ರುವರಿ 2012, 7:10 IST

ಹೈದರಾಬಾದ್ (ಐಎಎನ್ಎಸ್): ಸೋಮವಾರ ಇಲ್ಲಿ ಆರಂಭವಾದ ಆಂಧ್ರ ಪ್ರದೇಶದ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದ ವಿಧಾನಸಭೆಯ ಜಂಟಿ ಸಮಾವೇಶದಲ್ಲಿ ಪ್ರತ್ಯೇಕ ತೆಲಂಗಾಣ ಬೇಡಿಕೆಯ ~ಜೈ ತೆಲಂಗಾಣ ಘೋಷಣೆ~ಯು ಮತ್ತೆ ಪ್ರತಿಧ್ವನಿಸಿತು.

ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು,  ಜಂಟಿ ಸಮಾವೇಶವನ್ನು ಉದ್ದೇಶಿಸಿದ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ  ಪ್ರಮುಖ ವಿರೋಧ ಪಕ್ಷ ಟಿಆರ್ ಎಸ್ ನ ಸದಸ್ಯರು ಗದ್ದಲವೆಬ್ಬಿಸಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ ಪ್ರಸಂಗ ನಡೆಯಿತು.

ರಾಜ್ಯಪಾಲರು ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಟಿಆರ್ ಎಸ್ ( ತೆಲಂಗಾಣ ರಾಷ್ಟ್ರ ಸಮಿತಿ) ಸದಸ್ಯರು ತಮ್ಮಲ್ಲಿದ್ದ ಅವರ ಭಾಷಣದ ಪ್ರತಿಗಳನ್ನು ಹರಿದು, ಅದರ ತುಂಡುಗಳನ್ನು ಸದನದನದಲ್ಲಿ ಎಸೆದು, ಪ್ರತಿಭಟನೆ ನಡೆಸಿದರು.

ಗದ್ದಲದ ನಡುವೆಯೇ ರಾಜ್ಯಪಾಲರು ಭಾಷಣ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಸದನದ ಭದ್ರತಾ ಸಿಬ್ಬಂದಿಗಳು ರಾಜ್ಯಪಾಲರ ಸುತ್ತಲು ನಿಂತು ಕೊಂಡು ಅವರಿಗೆ ರಕ್ಷಣೆ ನೀಡಿದ ಪ್ರಸಂಗ ನಡೆಯಿತು.

ಇದೇ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಶಾಸಕರು, ~ಸರ್ಕಾರವು ರೈತರ ಹಾಗೂ  ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎನ್ನುತ್ತಾ ರಾಜ್ಯಪಾಲರು ಭಾಷಣಕ್ಕೆ ಅಡ್ಡಿಯನ್ನು ಉಂಟು ಮಾಡಿ ಪ್ರತಿಭಟಿಸಿದರು.

ADVERTISEMENT

ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಸದನವನ್ನು ಬಹಿಷ್ಕರಿಸಿ ಹೊರಗೆ ತೆರಳಿದ ನಂತರ ಸದನದಲ್ಲಿ ಶಾಂತಿ ನೆಲೆಸಿತು. ಆಗ ರಾಜ್ಯಪಾಲರು ನಿರಾಳವಾಗಿ ಭಾಷಣ ಮಾಡಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.