ಆಗ್ರಾ, (ಐಎಎನ್ಎಸ್): ಕಳೆದ ಶನಿವಾರ ನಾಲ್ಕು ಜೀವಗಳನ್ನು ಬಲಿ ಪಡೆದ ಆಗ್ರಾ ಬಾಂಬ್ ಸ್ಫೋಟಕ್ಕೆ ಬಳಸಿದ ಸಂಕೀರ್ಣ ವೆಲ್ಡಿಂಗ್ ಕೆಲಸ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಗಮನ ಸೆಳೆದಿದೆ. ಅದರ ಜಾಡು ಹಿಡಿದು ಹೊರಟಿರುವ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ವಿಧ್ವಂಸಕ ಕೃತ್ಯಕ್ಕೆ ಬಳಸಲಾಗಿರುವ ಸುಧಾರಿತ ಸ್ಫೋಟಕ ಸಾಧನದಲ್ಲಿ ಅಳವಡಿಸಿರುವ ರಾಸಾಯನಿಕ, ಎಲೆಕ್ಟ್ರಾನಿಕ್ ಬಿಡಿಭಾಗ ಉಳಿದ ಬಾಂಬ್ಗಳಂತೆ ಸಾಮಾನ್ಯವಾಗಿವೆ. ಆದರೆ, ಅವುಗಳನ್ನು ಜೋಡಿಸಿರುವ ಬಗೆ, ವಿನ್ಯಾಸ ಹಾಗೂ ಬೆಸುಗೆ (ವೆಲ್ಡಿಂಗ್) ಕಾರ್ಯ ಮಾತ್ರ ವಿಭಿನ್ನವಾಗಿದೆ. ಈ ತರಹದ ಸಂಕೀರ್ಣ ವಿಶೇಷ ವೆಲ್ಡಿಂಗ್ ಪೊಲೀಸರ ಗಮನ ಸೆಳೆದಿದ್ದು ಈವರೆಗೂ ಇಂತಹ ಬೆಸುಗೆ ಕಾರ್ಯ ಕಂಡಿಲ್ಲ ಎಂದಿದ್ದಾರೆ.
ಪೊಲೀಸರು ಗುರುವಾರ ಸ್ಥಳೀಯ ವೆಲ್ಡಿಂಗ್ ಕೆಲಸಗಾರರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಪಟಾಕಿ ತಯಾರಿಕೆಯಲ್ಲಿ ನೈಪುಣ್ಯ ಸಾಧಿಸಿದ ಸ್ಥಳೀಯರು ತಯಾರಿಸಿದ ಕಚ್ಚಾ ಬಾಂಬ್ನಂತೆ ಇದು ಕಾಣುತ್ತಿದ್ದು, ಸಂಕೀರ್ಣ ಬೆಸುಗೆ ಕೆಲಸವನ್ನು ಸ್ಥಳೀಯರೇ ಮಾಡಿರಬಹುದು ಎಂದು ಡಿಐಜಿ ಅಸೀಮ್ ಅರುಣ್ ಹೇಳಿದ್ದಾರೆ.
ಇದು ಉಗ್ರರ ಕೃತ್ಯ ಇರಬಹುದು ಎಂಬ ವಾದವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಉಳಿದ ತನಿಖಾ ಸಂಸ್ಥೆಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಬರೇಲಿ, ಕಾನ್ಪುರ ಮತ್ತು ದೆಹಲಿಗಳಿಗೆ ವಿಶೇಷ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.