ಮುಂಬೈ(ಪಿಟಿಐ): ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ದಂತವೈದ್ಯ ದಂಪತಿ ರಾಜೇಶ್ ಹಾಗೂ ನೂಪುರ್ ತಲ್ವಾರ್ ಪುತ್ರಿ ಆರುಷಿ ಹತ್ಯೆ ಆಧರಿಸಿದೆ ಎಂದು ಹೇಳಲಾಗುತ್ತಿರುವ ‘ರಹಸ್ಯ’ ಚಲನಚಿತ್ರದ ಖಾಸಗಿ ವೀಕ್ಷಣೆಗೆ ದಂಪತಿಯ ಸಂಬಂಧಿಯೊಬ್ಬರಿಗೆ ವಿಶೇಷ ಅನುಮತಿ ನೀಡಲಾಗುವುದು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.
‘ರಹಸ್ಯ’ ಚಿತ್ರ ಇನ್ನೂ ಬಿಡುಗಡೆ ಯಾಗಬೇಕಿದ್ದು, 2008 ರಲ್ಲಿ ನೊಯಿಡಾದ ಮನೆಯಲ್ಲಿ ನಡೆದ ಪುತ್ರಿ ಹತ್ಯೆ ಬಗ್ಗೆ ಸುಳ್ಳು ಮಾಹಿತಿ ಒಳಗೊಂಡ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆರುಷಿ ದಂಪತಿ ಹೈಕೋರ್ಟ್ ಮೆಟ್ಟಿ ಲೇರಿದ್ದರು. ಅಲ್ಲದೆ ಚಿತ್ರ ವೀಕ್ಷಣೆಗೆ ತಮ್ಮ ಕುಟುಂಬದ ಒಬ್ಬ ಸದಸ್ಯರಿಗೆ ಅನುಮತಿ ನೀಡುವಂತೆ ನ್ಯಾಯಾ ಲಯವನ್ನು ಕೋರಿದ್ದರು.
ಆರುಷಿ ಹತ್ಯೆಗೆ ಸಂಬಂಧವಿರದ ಈ ಚಲನಚಿತ್ರವು ಕಾಲ್ಪನಿಕ ಕಥೆ ಆಧರಿಸಿದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣ ಪತ್ರ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಚಿತ್ರದ ಸತ್ಯಾಸತ್ಯತೆ ತಿಳಿಯಲು ಆರುಷಿ ದಂಪತಿಯ ಸಂಬಂಧಿಗೆ ಅವಕಾಶ ನೀಡಲಾಗುವುದು. ಆದರೆ ಈ ಬಗ್ಗೆ ಯಾವ ಮಾಹಿತಿ ಹೊರಗೆಡವ ಬಾರದು ಎಂಬ ಷರತ್ತು ಒಡ್ಡಿ ಚಿತ್ರ ನಿರ್ದೇಶಕ ಮನೀಶ್ ಗುಪ್ತಾ ಹಾಗೂ ಯುವಿಐ ಪಿಲ್ಮ್ಸ್ನ ನಿರ್ಮಾಪಕರ ಪರ ವಕೀಲ ಅತುಲ್ ದಾಮ್ಲೆ ನ್ಯಾಯಾ ಲಯಕ್ಕೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.