ADVERTISEMENT

ಆಸಾರಾಮ್ ಬಾಪು ವಿರುದ್ಧ 700 ಕೋಟಿ ಭೂ ಕಬಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಜನವರಿ 2013, 9:48 IST
Last Updated 16 ಜನವರಿ 2013, 9:48 IST
ಆಸಾರಾಮ್ ಬಾಪು
ಆಸಾರಾಮ್ ಬಾಪು   

ಮುಂಬೈ (ಪಿಟಿಐ): ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದ ಆಧ್ಯಾತ್ಮಿಕ ಗುರು ಆಸಾರಾಮ್ ಬಾಪು ಅವರು ಇದೀಗ ಮಧ್ಯಪ್ರದೇಶದಲ್ಲಿ ಸುಮಾರು ರೂ. 700 ಕೋಟಿ ಮೌಲ್ಯದ ಆಸ್ತಿ ಕಬಳಿಕೆ ಮಾಡಿರುವ ಹಗರಣದಲ್ಲಿ ಸಿಲುಕಿದ್ದಾರೆ.

ಬಾಪು ಅವರ ವಿರುದ್ಧದ ಭೂ ಕಬಳಿಕೆ ಹಗರಣವನ್ನು ಕೈಗೆತ್ತಿಕೊಂಡಿರುವ ಗಂಭೀರ ವಂಚನೆ ತನಿಖೆ ಅಧಿಕಾರಿಗಳು (ಎಸ್‌ಎಫ್‌ಐಓ) ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ರತ್ಲಾಮ್‌ನಲ್ಲಿರುವ ಸುಮಾರು 200 ಎಕರೆ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಹಾಗೂ ಕಂಪೆನಿ ಕಾಯ್ದೆ 1956ರ ಅಡಿಯಲ್ಲಿ ಆಸಾರಾಮ್ ಬಾಪು ಹಾಗೂ ಅವರ ಮಗನ ವಿರುದ್ಧ ಕಾನೂನು ಕ್ರಮ ಜರಗಿಸುವ ಅಗತ್ಯವಿದೆ ಎಂದು ಎಸ್‌ಎಫ್‌ಐಓ ಇತ್ತೀಚೆಗಷ್ಟೇ ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಕಳುಹಿಸಿದೆ.

`ಭೂ ಕಬಳಿಕೆಗೆ ಸಂಬಂಧಿಸಿದಂತೆ ಆಸಾರಾಮ್ ಬಾಪು ಹಾಗೂ ಅವರ ಪುತ್ರ ನಾರಾಯಣ್ ಸಾಯಿ ಸೇರಿದಂತೆ ಕೆಲವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂಬ ಎಸ್‌ಎಫ್‌ಐಓ ಶಿಫಾರಸು ಪತ್ರ ನಮ್ಮ ಕೈ ಸೇರಿದ್ದು, ಇದನ್ನು ಪರಿಗಣಿಸಲಾಗುವುದು' ಎಂದು  ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಧ್ಯಪ್ರದೇಶದಲ್ಲಿ ದೆಹಲಿ - ಪುಣೆ ಕಾರಿಡಾರ್‌ಗೆ ಹೊಂದಿಕೊಂಡಂತೆ ಇರುವ ಜಯಂತ್ ವೀಟಾಮಿನ್ ಲಿಮಿಟೆಡ್‌ಗೆ (ಜೆವಿಎಲ್) ಸೇರಿದ ಸುಮಾರು 200 ಎಕರೆ ಭೂಮಿಯನ್ನು ಬಾಪು 2000 ಇಸ್ವಿಯಲ್ಲಿ ಕಬಳಿಸಿದ್ದಾರೆ ಎಂದು ಜೆವಿಎಲ್‌ನ ಷೇರುದಾರರೊಬ್ಬರು ಸಚಿವಾಲಯಕ್ಕೆ ದೂರು ಸಲ್ಲಿಸಿದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.