ADVERTISEMENT

ಆಹಾರದ ಆಯ್ಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಬಂಧವಿಲ್ಲ: ರಾಜ್‌ನಾಥ್‌ ಸಿಂಗ್‌ ಭರವಸೆ

ಏಜೆನ್ಸೀಸ್
Published 13 ಜೂನ್ 2017, 10:51 IST
Last Updated 13 ಜೂನ್ 2017, 10:51 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಐಜ್ವಾಲಾ: ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ ರೂಪಿಸಿದ್ದ ಕಾನೂನನ್ನು ವಿರೋಧಿಸಿ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಜನರ ಆಹಾರದ ಆಯ್ಕೆಯ ವಿಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ನಗರದಲ್ಲಿ ಸ್ಥಳೀಯ ಸಂಘಟನೆಗಳು ತಮ್ಮ ಆಹಾರದ ಆಯ್ಕೆಯ ಸ್ವಾತಂತ್ರದ ಮೇಲೆ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಆರೋಪಿಸಿ ‘ಗೋಮಾಂಸ ನಿಷೇಧದ ಭೋಜನಕೂಟ’ವನ್ನು ಆಯೋಜಿಸಿದ್ದವು.

ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಕಿರಣ್‌ ರಿಜಿಜು ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಟಿ ನಡೆಸಿದ ರಾಜ್‌ನಾಥ್‌ ಸಿಂಗ್‌, ‘ಕೇಂದ್ರ ಸರ್ಕಾರ ದೇಶದ ಯಾವೊಬ್ಬ ವ್ಯಕ್ತಿಯ ಆಹಾರದ ಆಯ್ಕೆಯ ಮೇಲೆ ನಿರ್ಬಂಧ ವಿಧಿಸುವುದಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಂತಹದೇ ಭರವಸೆ ನೀಡಿದ್ದರು.

ADVERTISEMENT

ಕೇಂದ್ರ ಸರ್ಕಾರ ಕಾನೂನಿನ ಮೂಲಕ ಆಹಾರದ ಆಯ್ಕೆಯ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ರಾಷ್ಟ್ರದಾದ್ಯಂತ ಕೇಳಿಬಂದಿತ್ತು. ಗೋಮಾಂಸ ಈಶಾನ್ಯ ಭಾರತ ರಾಜ್ಯಗಳ ಪ್ರಧಾನ ಆಹಾರವಾಗಿದ್ದು, ಈ ಭಾಗದಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ.

ಸೋಮವಾರ ಈಶಾನ್ಯ ಭಾರತದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ರಾಜ್‌ನಾಥ್‌ ಸಿಂಗ್‌, ಕೇಂದ್ರ ಸರ್ಕಾರದ ವತಿಯಿಂದ ಮಿಜೋರಾಂನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸದ್ಯ ಒದಗಿಸಲಾಗುತ್ತಿರುವ ಭದ್ರತಾ ಸೌಲಭ್ಯಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.