ADVERTISEMENT

ಆಹಾರ ಭದ್ರತೆ ಯೋಜನೆ: ಶೀಲಾ ದೀಕ್ಷಿತ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ರಾಜ್ಯ ಸರ್ಕಾರದ ಬಹುಮಹತ್ವಾಕಾಂಕ್ಷೆಯ ಆಹಾರ ಭದ್ರತೆ ಯೋಜನೆಯನ್ನು ಟೀಕಾಕಾರರು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.

ಐವರು ಸದಸ್ಯರ ಬಡ ಕುಟುಂಬಕ್ಕೆ ಅಕ್ಕಿ, ಗೋಧಿ ಮತ್ತು ಬೇಳೆಗಾಗಿ ತಿಂಗಳಿಗೆ 600 ರೂಪಾಯಿ ಸಾಕು ಎಂಬ ಶೀಲಾ ದೀಕ್ಷಿತ್ ಅವರ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

`ನಾನು ನೀಡಿದ ಹೇಳಿಕೆಯನ್ನು ಸಂದರ್ಭದ ಹಿನ್ನೆಲೆ ಬಿಟ್ಟು ಅರ್ಥೈಸಿಕೊಂಡು ಟೀಕಿಸಲಾಗಿದೆ. ವಿಶಾಲವಾದ ದೃಷ್ಟಿಯನ್ನಿಟ್ಟುಕೊಂಡು ರೂಪಿಸಲಾಗಿರುವ ಈ ಯೋಜನೆಯಲ್ಲಿ 600 ರೂಪಾಯಿಗಳ ಸಬ್ಸಿಡಿಯನ್ನು ರಾಜ್ಯ ಸರ್ಕಾರ `ಆಧಾರ್' ಮೂಲಕ ನೇರವಾಗಿ ಫಲಾನುಭವಿಗಳ ಕುಟುಂಬದ ಅತ್ಯಂತ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ರಾಜ್ಯದಲ್ಲಿರುವ ಎರಡು ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ' ಎಂದರು.

ದೀಕ್ಷಿತ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಬಿಜೆಪಿ ಮುಖಂಡ ವಿಜಯ್ ಗೋಯಲ್, ಮುಖ್ಯಮಂತ್ರಿಗಳಿಗೆ ಬೇಳೆ- ಕಾಳುಗಳ ದರ ಎಷ್ಟಿದೆ ಎಂಬ ಅರಿವಿಲ್ಲ ಎಂದು ಜರೆದಿದ್ದರು. ದೆಹಲಿ ಸರ್ಕಾರದ ಈ ಯೋಜನೆಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.