ADVERTISEMENT

ಇಬ್ಬರು ಹಡಗು ಸಿಬ್ಬಂದಿ ಪೊಲೀಸರ ವಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 12:15 IST
Last Updated 19 ಫೆಬ್ರುವರಿ 2012, 12:15 IST
ಇಬ್ಬರು ಹಡಗು ಸಿಬ್ಬಂದಿ ಪೊಲೀಸರ ವಶ
ಇಬ್ಬರು ಹಡಗು ಸಿಬ್ಬಂದಿ ಪೊಲೀಸರ ವಶ   

 ಕೊಚ್ಚಿ (ಐಎಎನ್ಎಸ್): ಇಬ್ಬರು ಭಾರತೀಯ ಮೀನುಗಾರರನ್ನು ಕಡಲ್ಗಳ್ಳರೆಂದು ಭಾವಿಸಿ ಗುಂಡು ಹಾರಿಸಿ ಅವರ ಸಾವಿಗೆ ಕಾರಣರಾದ ಇಟಲಿಯ ಸರಕು ಸಾಗಣಿಕಾ ಹಡಗಿನ ಇಬ್ಬರು ಸಿಬ್ಬಂದಿಯನ್ನು ಭಾನುವಾರ ಸಂಜೆ ಹಡಗಿನಿಂದ ಕೆಳಗಿಳಿಸಿಕೊಂಡಿರುವ ಕೇರಳದ ಪೊಲೀಸರು ಇಲ್ಲಿನ ಕೇಂದ್ರೀಯ ಔದ್ಯೋಗಿಕ ಭದ್ರತಾ ದಳದ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.

ಕೇರಳದ ಹಿರಿಯ ಪೊಲೀಸರು ಮತ್ತು ಇಟಲಿಯ ಅಧಿಕಾರಿಗಳ ತಂಡ ಸಂಜೆ 4.30ಕ್ಕೆ ಹಡಗಿನತ್ತ ಬಂದು, ಮೀನುಗಾರರ ಹತ್ಯೆ ಪ್ರಕರಣದ ಕುರಿತಂತೆ ಹಡಗಿನಲ್ಲಿದ್ದ ಇಬ್ಬರು ಭದ್ತತಾ ಸಿಬ್ಬಂದಿಯನ್ನು ಹಡಗಿನಿಂದ ಕೆಳಗಿಳಿಸಿಕೊಂಡು, ಬಿಗಿ ಭದ್ರತೆಯಲ್ಲಿ ಸನಿಹದ ಕೇಂದ್ರೀಯ ಔದ್ಯೋಗಿಕ ಭದ್ತತಾ ದಳದ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಇಟಲಿಯ ಸರಕು ಸಾಗಣಿಕಾ ಹಡಗಿನ ಸಿಬ್ಬಂದಿಯನ್ನು ಹಡಗು `ಎನ್‌ರಿಕಾ ಲೆಕ್ಸಿ`ಯ ಸಮೇತ ಶುಕ್ರವಾರ ಕೊಚ್ಚಿಗೆ ಕರೆತರಲಾಗಿತ್ತು. ಶನಿವಾರ ತಡ ರಾತ್ರಿ ಆ ಹಡಗಿನ ಕ್ಯಾಪ್ಟನ್ ಮೀನುಗಾರರ ಹತ್ಯೆ ಪ್ರಕರಣದ ವಿಚಾರಣೆಗೆ ಸಹಕರಿಸಲು ಸಮ್ಮತಿಸಿದ್ದರು. ಭಾನುವಾರ ಆ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕೊಲ್ಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ನಿಟ್ಟಿನಲ್ಲಿ ಅವರೇ ಮುಂದಿನ ಕ್ರಮ ಜರುಗಿಸಲಿದ್ದಾರೆ. ಅಲ್ಲಿನ ನ್ಯಾಯಾಲಯವೇ ಮುಂದೆ ವಿಚಾರಣೆ ನಡೆಸಬಹುದು. ಹಡಗಿನಿಂದ ಕರೆದುಕೊಂಡ ಬಂದ ಆ ಇಬ್ಬರು ಇಟಲಿ ಹಡಗಿನ ಸಿಬ್ಬಂದಿಯ ಹೆಸರು ಲೆಸ್ಟೋರ್ ಮತ್ತು ಸೆಲ್ವೆಸೋರ್ ಎಂದು ಪತ್ರಕರ್ತರಿಗೆ ತಿಳಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಕೆ.ಪದ್ಮಕುಮಾರ್ ಅವರು ಪ್ರಕರಣದ ಕುರಿತು ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT