ನವದೆಹಲಿ, (ಪಿಟಿಐ): ವಿವಾದಿತ ಅಂತರಿಕ್ಷ್ ಮತ್ತು ದೇವಾಸ್ ಮಲ್ಟಿಮೀಡಿಯ ನಡುವಿನ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಇಸ್ರೊದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಮತ್ತು ಮೂವರು ಹಿರಿಯ ವಿಜ್ಞಾನಿಗಳು ಯಾವುದೇ ಸರ್ಕಾರಿ ಹುದ್ದೆಗಳನ್ನು ನಿರ್ವಹಿಸುವುದಕ್ಕೆ ನಿರ್ಬಂಧ ಹೇರಿದೆ.
ವಿವಾದಿತ ಅಂತರಿಕ್ಷ್ ಮತ್ತು ದೇವಾಸ್ ಮಲ್ಟಿಮೀಡಿಯ ನಡುವಿನ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಪ್ರಕರಣದಲ್ಲಿನ ಒಪ್ಪಂದದ ಸಂದರ್ಭದಲ್ಲಿ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮಗಳನ್ನು ಎಸಗಲಾಗಿದೆ, ಖಾಸಗಿ ಸಂಸ್ಥೆಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಇಸ್ರೊದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಅವರೊಂದಿಗೆ ಇಸ್ರೊದ ವಿಜ್ಞಾನ ಕಾರ್ಯದರ್ಶಿ ಕೆ.ಭಾಸ್ಕರ ನಾರಾಯಣ , ಇಸ್ರೊದ ವಾಣಿಜ್ಯ ವಿಭಾಗ ಅಂತರಿಕ್ಷದ ಮಾಜಿ ಆಡಳಿತ ನಿರ್ದೇಶಕ ಕೆ.ಆರ್. ಶ್ರೀಧರ್ ಮೂರ್ತಿ ಮತ್ತು ಇಸ್ರೊದ ಉಪಗ್ರಹ ಕೇಂದ್ರದ ನಿರ್ದೇಶಕ ಕೆ.ಎನ್.ಶಂಕರ್ ಅವರಿಗೆ ಯಾವುದೇ ಸರ್ಕಾರಿ ಹುದ್ದೆ ಹೊಂದದಂತೆ ನಿರ್ಬಂಧ ಹೇರಲಾಗಿದೆ.
ನಾಯರ್ ಅವರು ಇಸ್ರೊದ ಅಧ್ಯಕ್ಷರಾಗಿದ್ದಾಗ ದೇವಾಸ್ ಮಲ್ಟಿಮೀಡಿಯ ಸಂಸ್ಥೆಯೊಂದಿಗೆ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಕುರಿತಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.