ADVERTISEMENT

ಉದ್ಯಮ ದಿಗ್ಗಜರ ಕಪ್ಪು ಹಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 19:30 IST
Last Updated 9 ನವೆಂಬರ್ 2012, 19:30 IST

ಜಿನೀವಾ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಠೇವಣಿ: ಕೇಜ್ರಿವಾಲ್ ಆರೋಪ

ನವದೆಹಲಿ (ಪಿಟಿಐ): ಉದ್ಯಮ ರಂಗದ ದಿಗ್ಗಜರೆನಿಸಿದ ಅಂಬಾನಿ ಸಹೋದರರು,  ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಹಾಗೂ ಕಾಂಗ್ರೆಸ್ ಸಂಸದೆ ಅನು ಟಂಡನ್ ಅವರಿಗೆ ಸೇರಿದ ಸುಮಾರು ರೂ 6000 ಕೋಟಿಗಳಷ್ಟು  ಕಪ್ಪುಹಣ ಬಹುರಾಷ್ಟ್ರೀಯ ಎಚ್‌ಎಸ್‌ಬಿಸಿ ಬ್ಯಾಂಕ್‌ನ ಜಿನೀವಾ ಶಾಖೆಯಲ್ಲಿದ್ದು, ಇದಕ್ಕೆ ಬ್ಯಾಂಕ್‌ನ ಸಹಕಾರವೂ ಇದೆ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ‌್ಯಕರ್ತ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಸೋನಿಯಾ ಅಳಿಯ ರಾಬರ್ಟ್ ವಾದ್ರಾ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ  ರಾಜಕೀಯ ಮುಖಂಡರ ವಿರುದ್ಧ ಗಂಭೀರ ಸ್ವರೂಪದ ಭ್ರಷ್ಟಾಚಾರ ಆರೋಪ ಹೊರಿಸಿ ಸುದ್ದಿಯಲ್ಲಿರುವ ಕೇಜ್ರಿವಾಲ್ ಅವರ ಕಣ್ಣು ಇದೀಗ ಉದ್ಯಮ ದಿಗ್ಗಜರ ಮೇಲೆ ಬಿದ್ದಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಎಚ್‌ಎಸ್‌ಬಿಸಿ ಬ್ಯಾಂಕ್‌ನ 700 ಖಾತೆಗಳಲ್ಲಿ ಕಪ್ಪು ಹಣವಿದೆ. ಇತ್ತೀಚೆಗೆ ಸಣ್ಣ ಮೊತ್ತ ಹೊಂದಿದ ಖಾತೆದಾರರ ಮೇಲೆ ದಾಳಿ ನಡೆಸಲಾಗಿದೆಯಾದರೂ ಅಂಬಾನಿಯಂತಹ ದೊಡ್ಡ `ಕುಳ~ಗಳನ್ನು ಕೈಬಿಡಲಾಗಿದೆ. ವಾಸ್ತವವಾಗಿ ಬಲೆಗೆ ಹಾಕಬೇಕಾಗಿದ್ದು ಅಂಬಾನಿ ಸಹೋದರರಂತಹ ದೊಡ್ಡ ದೊಡ್ಡ ಮೀನುಗಳನ್ನು. ಆದರೆ ಈ ಎಲ್ಲರನ್ನು ಸರ್ಕಾರದ ಅಣತಿಯಂತೆ ರಕ್ಷಿಸಲಾಗಿದೆ ಎಂದು ಕೇಜ್ರಿವಾಲ್ ಹಾಗೂ ವಕೀಲ ಪ್ರಶಾಂತ್ ಭೂಷಣ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

2006ರಲ್ಲಿದ್ದಂತೆ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಅಂಬಾನಿ ಸಹೋದರರ ತಲಾ 100 ಕೋಟಿ, ರಿಲಯನ್ಸ್ ಗುಂಪಿನ ಮೊಟೆಕ್ ಸಾಫ್ಟ್‌ವೇರ್ 2,100 ಕೋಟಿ, ಸಂದೀಪ್ ಹಾಗೂ ಅನು ಟಂಡನ್ ತಲಾ 125 ಕೋಟಿ, ನರೇಶ್ ಗೋಯಲ್ 80 ಕೋಟಿ, ಹಾಗೂ ಡಾಬರ್‌ನ ಬರ್ಮನ್ ಸಹೋದರರ 25 ಕೋಟಿ ಹಣ 700 ವಿವಿಧ ಖಾತೆಗಳಲ್ಲಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.

ಸುಳ್ಳು ಆರೋಪ: ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಕೇಶ್ ಅಂಬಾನಿ, ತಾವಾಗಲಿ ಇಲ್ಲವೆ ತಮ್ಮ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಆಗಲಿ ವಿಶ್ವದ ಎಲ್ಲೇ ಆಗಲಿ ಅಕ್ರಮವಾಗಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿಲ್ಲ. ವ್ಯವಹಾರದ ಸಾಮಾನ್ಯ ಪ್ರಕ್ರಿಯೆಯಂತೆ ಎಚ್‌ಎಸ್‌ಬಿಸಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಬ್ಯಾಂಕ್‌ಗಳ ಜತೆ ಆರ್‌ಐಎಲ್ ಸಂಪರ್ಕ ಇದ್ದು ಇದೆಲ್ಲ ಕಾನೂನು ಪ್ರಕಾರವೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಜ್ರಿವಾಲ್ ತಮ್ಮ ಸಂಸ್ಥೆಯ ವಿರುದ್ಧ ಮಾಡಿರುವ ಆರೋಪದ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದೆ. ಬ್ಯಾಂಕ್ ಫಲಾನುಭವಿ ಖಾತೆದಾರರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅವರ ಹೆಸರನ್ನೂ ಎಚ್‌ಎಸ್‌ಬಿಸಿ ಬ್ಯಾಂಕ್ ಸೇರಿಸಿದ್ದು ಈ ಕುರಿತು ಬ್ಯಾಂಕ್ ಈಗಾಗಲೇ ಅಂಬಾನಿ ಅವರ ಕ್ಷಮೆ ಕೇಳಿದೆ ಎಂದು ಈ ಸಂಬಂಧ ಆರ್‌ಐಎಲ್ ಹೊರಡಿಸಿದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಎಚ್‌ಎಸ್‌ಬಿಸಿ ಬ್ಯಾಂಕ್ ಹಾಗೂ ಬರ್ಮನ್ ಸಹೋದರರ ವಕ್ತಾರರೂ ಸಹ ಕೇಜ್ರಿವಾಲ್ ಆರೋಪವನ್ನು ಶುದ್ಧ ಆಧಾರರಹಿತ ಹಾಗೂ ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ. 
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.