ನವದೆಹಲಿ: ದೇಶದಲ್ಲಿ ಐಫೋನ್ ತಯಾರಿಸಲು ತೆರಿಗೆ ವಿನಾಯಿತಿ ನೀಡಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕಿದ್ದರೆ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗೆ ಬದ್ಧವಾಗಿರಬೇಕು ಎಂದು ಆ್ಯಪಲ್ ಕಂಪೆನಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ದೇಶದಲ್ಲಿ ಹೂಡಿಕೆ ಮಾಡಲು ಉದ್ದೇಶಿಸಲಾಗಿರುವ ಮೊತ್ತ, ಅದರಿಂದ ಸೃಷ್ಟಿಯಾಗಬಹುದಾದ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡುವಂತೆ ಕಂಪೆನಿಗೆ ಸರ್ಕಾರ ಸೂಚನೆ ನೀಡಿದೆ.
ಐಪ್ಯಾಡ್ ಮತ್ತು ಐಫೋನ್ಗಳನ್ನು ತಯಾರಿಸುವ ಕ್ಯಾಲಿಫೋರ್ನಿಯಾ ಮೂಲದ ಆ್ಯಪಲ್ ಕಂಪೆನಿ ಭಾರತದಲ್ಲಿ ಈಗಾಗಲೇ ಐಫೋನ್ ತಯಾರಿಕೆ ಆರಂಭಿಸಿದೆ. ವಿಸ್ಟ್ರೋನ್ ಕಾರ್ಪೊರೇಷನ್ನ ಬೆಂಗಳೂರಿನಲ್ಲಿರುವ ಘಟಕದಲ್ಲಿ ಮೊದಲ ಹಂತದ ಐಫೋನ್ ತಯಾರಿ ಆರಂಭಿಸಲಾಗಿದೆ.
ಆ್ಯಪಲ್ ಕಂಪನೆಯು ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅರುಣ್ ಸುಂದರರಾಜನ್ ಮೇ 23ರಂದು ತಿಳಿಸಿದ್ದರು.
‘ಭಾರತದಲ್ಲಿ ತಯಾರಿಸಿ’ ಯೋಜನೆ ಅಡಿ ದೇಶದಲ್ಲಿ ಉತ್ಪನ್ನಗಳನ್ನು ತಯಾರಿಸುವಂತೆ ವಿದೇಶಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸುತ್ತಲೇ ಇದೆ. ಕೆಲವು ವಸ್ತುಗಳು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳಲು 15 ವರ್ಷಗಳ ಅವಧಿಗೆ ಭತ್ಯೆ, ತೆರಿಗೆ ವಿನಾಯಿತಿ ನೀಡಬೇಕು ಎಂದು ಕಂಪೆನಿ ಮುಂದಿಟ್ಟಿದ್ದ ಬೇಡಿಕೆಯನ್ನು ಕಳೆದ ವರ್ಷ ಸರ್ಕಾರ ತಿರಸ್ಕರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.