ADVERTISEMENT

ಎಎಪಿ ಮುಖಂಡ ಯಾದವ್‌ ಮುಖಕ್ಕೆ ಮಸಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಅಂತರ­ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ­ವಾಗಿ ಇಲ್ಲಿನ ಜಂತರ್‌ ಮಂತರ್‌­ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಆಮ್‌ ಆದ್ಮಿ ಪಕ್ಷದ ಮುಖಂಡ ಯೋಗೇಂದ್ರ ಯಾದವ್‌ ಮುಖಕ್ಕೆ ವ್ಯಕ್ತಿಯೊಬ್ಬ ಮಸಿ ಎರಚಿದ ಘಟನೆ ಶನಿವಾರ ನಡೆಯಿತು.

ಎಎಪಿಯ ಟೊಪ್ಪಿ ಮತ್ತು ಲಾಂಛನ ಧರಿಸಿ, ಭಾರತ ಮಾತೆಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಿದ್ದ ಯುವಕ ಈ ಕೃತ್ಯ ಎಸಗಿದ್ದಾನೆ. ಆತನನ್ನು ದೆಹಲಿಯ  ಶಾಲಿಮಾರ್‌ ಬಾಗ್‌ನ ಸಾಗರ್‌ ಭಂಡಾರಿ (28) ಎಂದು ಗುರತಿಸಲಾಗಿದ್ದು, ತಾನೊಬ್ಬ ಅತೃಪ್ತ ಎಎಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಘಟನೆಯಿಂದ ರೊಚ್ಚಿಗೆದ್ದ ಪಕ್ಷದ ಕಾರ್ಯಕರ್ತರು ಸಾಗರ್‌ ಭಂಡಾರಿ­ಯನ್ನು ಹಿಗ್ಗಾಮುಗ್ಗಾ ಥಳಿಸಿದರು. ನಂತರ ಸಂಸತ್‌ ಸ್ಟ್ರೀಟ್‌ ಠಾಣೆ ಪೊಲೀಸರು ಕರೆದೊಯ್ದುರು. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಪೊಲೀಸರು ಚಿಕಿತ್ಸೆಗಾಗಿ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರು.

‘ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ದಾಳಿಗೆ ಒಳಗಾದ ವೇಳೆ ಮಾಧ್ಯ­ಮದವರೊಂದಿಗೆ ಮಾತನಾಡು­ತ್ತಿದ್ದೆ. ಈ ಸಲ ಅವನು ಹಿಂದಿನಿಂದ ಬಂದು ದಾಳಿ ನಡೆಸಿದ್ದಾನೆ. ಮುಂದಿನ ದಿಗಳಲ್ಲಿ ನೇರವಾಗಿ ದಾಳಿ ನಡೆಸಬ­ಹುದು’ ಎಂದು ಯಾದವ್‌ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.