ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರದ ಎರಡು ತಿಂಗಳ ಅವಧಿಯಲ್ಲಿ 803 ಅತ್ಯಾಚಾರ ಪ್ರಕರಣಗಳು ನಡೆದಿವೆ.
ವಿಧಾನಸಭೆಯಲ್ಲಿ ಮಂಗಳವಾರ, ಉತ್ತರಪ್ರದೇಶದಲ್ಲಿ ಮಾರ್ಚ್ 15ರಿಂದ ಮೇ 9ರ ನಡುವೆ ನಡೆದ ಅಪರಾಧ ಪ್ರಕರಣಗಳ ವಿವರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ, ‘ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರ ಬದ್ಧವಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸಮಾಜವಾದಿ ಪಕ್ಷದ ಶಾಸಕ ಶೈಲೇಂದ್ರ ಯಾದವ್ ಲಾಲೈ, ಅಪರಾಧ ಪ್ರಕರಣಗಳ ವಿವರ ಮತ್ತು ನಿಯಂತ್ರಣಕ್ಕೆ ಕೈಗೊಂಡ ವಿವರಗಳನ್ನು ಕೇಳಿದ್ದರು.
ಸಮಾಜವಾದಿ ಪಕ್ಷದ ಪರಸ್ನಾಥ ಯಾದವ್ ಹಿಂದಿನ ವರ್ಷಗಳಲ್ಲಿ ನಡೆದಿರುವ ಅಪರಾಧಗಳಿಗೆ ಹೋಲಿಕೆ ಮಾಡಿರುವ ವಿವರ ನೀಡಿ ಎಂದು ಕೋರಿದರು. ಆದರೆ, ಸಚಿವರ ಬಳಿ ಮಾಹಿತಿ ಲಭ್ಯವಿರಲಿಲ್ಲ.
ಸಚಿವರ ಉತ್ತರದಿಂದ ಅಸಮಾಧಾನಗೊಂಡ ವಿರೋಧ ಪಕ್ಷದ ನಾಯಕ ರಾಮ್ ಗೋವಿಂದ ಚೌಧರಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪಕ್ಷದ ಶಾಸಕರೊಂದಿಗೆ ಸಭಾತ್ಯಾಗ ಮಾಡಿದರು. ಕಾಂಗ್ರೆಸ್ ಶಾಸಕರು ಸಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಸಭಾತ್ಯಾಗ ಮಾಡಿದರು.
ಮಾರ್ಚ್ 15ರಿಂದ ಮೇ 9ರ ನಡುವೆ ದಾಖಲಾದ ಪ್ರಕರಣಗಳು
* 729 ಕೊಲೆ
* 799 ಲೂಟಿ
* 2682 ಅಪಹರಣ
* 60 ಡಕಾಯಿತಿ
* ಹಿಂದಿನ ಸರ್ಕಾರಗಳಲ್ಲಿ ಅಪರಾಧ ಪ್ರಕರಣಗಳನ್ನೇ ದಾಖಲಿಸುತ್ತಿರಲಿಲ್ಲ. ನಮ್ಮ ಸರ್ಕಾರ ಸಣ್ಣ ಅಪರಾಧಗಳಿಗೂ ಎಫ್ಐಆರ್ ದಾಖಲಿಸುತ್ತಿದೆ
–ಸುರೇಶ್ ಕುಮಾರ್ ಖನ್ನಾ
ಸಂಸದೀಯ ವ್ಯವಹಾರಗಳ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.