ಲಖನೌ: ‘ಉತ್ತರಪ್ರದೇಶದಲ್ಲಿ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳ ಮೈತ್ರಿಯಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 25ರಿಂದ 30 ಸೀಟುಗಳು ಕಡಿಮೆಯಾಗಬಹುದು’ ಎಂದು ಕೇಂದ್ರ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಮುಖ್ಯಸ್ಥ ರಾಮದಾಸ್ ಆಠವಲೆ ತಿಳಿಸಿದ್ದಾರೆ.
‘ಯಾವುದೇ ಪಕ್ಷ ಮೈತ್ರಿ ಮಾಡಿಕೊಂಡರೂ ಉತ್ತರಪ್ರದೇಶದಲ್ಲಿ ಬಿಜೆಪಿ ಮೈತ್ರಿಕೂಟ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಹೀಗಾಗಿ, ಬಿಜೆಪಿ ನೇತೃತ್ವದ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ.
‘ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ನಂಬಿಕೆ ದ್ರೋಹ ಮಾಡಿದ್ದರಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು. ಹೀಗಾಗಿ, ಈ ಮೈತ್ರಿ ಎಷ್ಟು ದಿನ ಉಳಿಯಲಿದೆ ಎನ್ನುವುದನ್ನು ನೋಡಬೇಕು. ದಲಿತರ ಬಗೆಗಿನ ಕಾಳಜಿ ನಿಜವಾಗಿದ್ದಲ್ಲಿ ಬಹುಜನ ಸಮಾಜ ಪಕ್ಷವು ಎನ್ಡಿಎಗೆ ಸೇರಲಿ’ ಎಂದು ಆಠವಲೆ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ 80 ಸ್ಥಾನಗಳ ಪೈಕಿ 73ರಲ್ಲಿ ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಕಾಂಗ್ರೆಸ್ಗೆ 2 ಮತ್ತು ಎಸ್ಪಿಗೆ 5 ಸ್ಥಾನಗಳು ಲಭಿಸಿದ್ದವು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಎಸ್ಪಿಗೆ ಎರಡು ಸ್ಥಾನಗಳು ದೊರಕಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.