ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ (ಎಸ್ಸಿ, ಎಸ್ಟಿ ಕಾಯ್ದೆ) ಸಂಬಂಧಿಸಿ ಮಾರ್ಚ್ 20ರಂದು ನೀಡಿದ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮತ್ತೆ ನಿರಾಕರಿಸಿದೆ.
‘ದುರುದ್ದೇಶದ ದೂರುಗಳಿಂದ ಜನರ ಸ್ವಾತಂತ್ರ್ಯವನ್ನು ರಕ್ಷಿಸುವುದು ಮಾತ್ರ ಆ ತೀರ್ಪಿನ ಉದ್ದೇಶ. ಜನರು ಅಪರಾಧ ಎಸಗಲು ಈ ತೀರ್ಪು ಅವಕಾಶ ನೀಡುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ರಕ್ಷಣೆ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅಪರಾಧ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಯಾರು ತಡೆದಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್ ಗೋಯಲ್ ಮತ್ತು ಯು.ಯು. ಲಲಿತ್ ಅವರ ಪೀಠ ಪ್ರಶ್ನಿಸಿದೆ.
ತೀರ್ಪಿನ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಜೀವ ಹಾನಿ ಆಗಿದೆ. ಅಲ್ಲದೆ, ಸಂಸತ್ತು ರೂಪಿಸಿದ ಕಾಯ್ದೆಗೆ ವ್ಯತಿರಿಕ್ತ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಹಾಗಾಗಿ ಈ ತೀರ್ಪನ್ನು ಅಮಾನತಿನಲ್ಲಿ ಇರಿಸಬೇಕು. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದರು.
ಕಾನೂನುಗಳಲ್ಲಿನ ಕೊರತೆಗಳನ್ನು ತುಂಬುವ ಕೆಲಸವನ್ನು ಮಾಡಬಹುದು. ಆದರೆ ಕಾಯ್ದೆಗೆ ವ್ಯತಿರಿಕ್ತವಾದ ತೀರ್ಪು ನೀಡುವಂತಿಲ್ಲ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.